ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಪಿ.ಆರ್.ಎಸ್. ಕೌಂಟರ ಉದ್ಘಾಟನೆ

ಭಟ್ಕಳ: ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಕೊಂಕಣ ರೈಲ್ವೆಯಿಂದ ಪ್ರವಾಸಿ ತಾಣವಾದ ಮುರುಡೇಶ್ವರದಲ್ಲಿ ಪ್ರವಾಸಿಗರಿಗೆ ಹಾಗೂ ಪ್ರಯಾಣಿಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಪಿ.ಆರ್.ಎಸ್. ಕೌಂಟರ(ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯ ಕೌಂಟರ) ನ್ನು ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ನ ನಿರ್ದೇಶಕ ಅಧಿಕಾರಿ ಸಂತೋಷಕುಮಾರ ಜಹಾ ಅವರು ಉದ್ಘಾಟಿಸಿದರು.

ಸ್ಥಳೀಯ ನಾಗರಿಕಾ ಸೇವಾ ಸಮಿತಿ ಹಾಗೂ ಸಾಕಷ್ಟು ಸಾರ್ವಜನಿಕರ ಒತ್ತಾಯದ ಜೊತೆಗೆ ಕಳೆದ ಎರಡು ತಿಂಗಳ ಹಿಂದೆ ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ನ ನಿರ್ದೇಶಕ ಅಧಿಕಾರಿ ಸಂತೋಷಕುಮಾರ ಜಹಾ ಅವರು ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಅವರಿಗೆ ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ
ಪಿ.ಆರ್.ಎಸ್. ಕೌಂಟರ ತೆರೆಯುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಕೊಂಕಣ ರೈಲ್ವೆ ನಿರ್ದೇಶಕ ಅಧಿಕಾರಿ ಅವರು ಕೊಂಕಣ ರೈಲ್ವೆ ನಿಗಮದ ಮೇಲಾಧಿಕಾರಿಗಳ ಗಮನಕ್ಕೆ ತಂದು ಪಿ.ಆರ್.ಎಸ್. ಕೌಂಟರ ತೆರೆಯಲು ಪರವಾನಗಿ ಪಡೆದುಕೊಂಡರು.

ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಮುರುಡೇಶ್ವರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ನ ನಿರ್ದೇಶಕ ಅಧಿಕಾರಿ ಸಂತೋಷಕುಮಾರ ಜಹಾ ಅವರು ಮೊದಲು ಟಿಕೆಟ್ ಕೌಂಟರ ಕೊಠಡಿಯಲ್ಲಿ ಪೂಜೆ ಸಲ್ಲಿಸಿ ಆ ಬಳಿಕ ಪಿಆರ್ ಎಸ್ ಕೌಂಟರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಇಲ್ಲಿನ ಸಾಕಷ್ಟು ಜನರ ಬೇಡಿಕೆಯ ಮೇರೆಗೆ ಎರಡು ತಿಂಗಳ ನಂತರ ಕೊಂಕಣ ರೈಲ್ವೆಯಿಂದ ಕೌಂಟರ ತೆರೆಯಲು ಒಪ್ಪಿಗೆ ಸಿಕ್ಕಿದೆ. ಇದರ ಸದುಪಯೋಗವನ್ನು ಇಲ್ಲಿನ ಸ್ಥಳೀಯ ಪ್ರಯಾಣಿಕರು, ಪ್ರವಾಸಿಗರು ಬಳಸಿಕೊಳ್ಳಬೇಕು. ದಿನದ ಒಂದು ಶಿಪ್ಟನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಟಿಕೆಟ್ ಪಡೆದುಕೊಳ್ಳಬಹುದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕೊಂಕಣ ರೈಲ್ವೆ ಮುಂಬಯಿ
ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಎಲ್.ಕೆ. ವರ್ಮಾ,
ರಿಜನಲ್ ರೈಲ್ವೆ ಮ್ಯಾನೇಜರ ಕಾರವಾರ ಬಿ.ಬಿ.ನಿಕ್ಕಮ್, ಮಂಗಳೂರು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಶ್ರೀಮತಿ ಸುಧಾ ಕ್ರಷ್ಣಮೂರ್ತಿ, ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಮಂಗಳೂರು ಜಿ.ಡಿ.ಮೀನಾ, ನಾಗರಿಕಾ ಸೇವಾ ಸಮಿತಿ ಅಧ್ಯಕ್ಷ ಎಸ್.ಎಸ್. ಕಾಮತ ಹಾಗೂ ಸಮಿತಿ ಪ್ರಮುಖರು, ಮುರುಡೇಶ್ವರ ರೈಲ್ವೆ ಪೋಲಿಸ್ ಸಬ್ ಇನ್ಸಪೆಕ್ಟರ್
ಬಿ. ಜಸ್ಟಿನ್ ಉಪಸ್ಥಿತರಿದ್ದರು.