ಅಂಕೋಲಾ: ಸರಳೇಬೈಲ್ ಬಳಿ ಕಾರು ಮರಕ್ಕೆ ಡಿಕ್ಕಿ ಓರ್ವರ ಸಾವು; ನಾಲ್ವರಿಗೆ ಗಾಯ

ಅಂಕೋಲಾ: ತಾಲೂಕಿನ ಸರಳೇಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನೋವಾ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.
ತೆಲಂಗಾಣದ ಹೈದರಾಬಾದ್ ತಿರುಮಲಗಿರಿ ನಿವಾಸಿ ರೋಹಿತ್‌ ಬುದ್ಧ ಜ್ಞಾನೇಶ್ವರ ಯಾದವ (33) ಮೃತ ವ್ಯಕ್ತಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಆಂಧ್ರಪ್ರದೇಶ ಹೈದರಾಬಾದ್ ನಿವಾಸಿ ಉಪೇಂದ್ರ ರಾಘವ ರೆಡ್ಡಿ ಎನ್ನುವವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ನೆಲಮ್ ಕೌಶಿಕ್ ಮೂರ್ತಿ ಮತ್ತು ಕಾರಿನಲ್ಲಿ ಪ್ರಯಾಣಿ ಸುತ್ತಿದ್ದ ಬಳ್ಳಾರಿ ಸಾಯಿಪ್ರಸಾದ್‌ ಎನ್ನುವವರಿಗೆ ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೈದರಾಬಾದ್ ನಿಂದ ಗೋವಾ, ಗೋಕರ್ಣ ಮೊದಲಾದ ಪ್ರದೇಶಗಳಿಗೆ ಇನೋವಾ ವಾಹನದಲ್ಲಿ ಪ್ರವಾಸಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಅಂಕೋಲಾ ಸರಳೇಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿಪಿಐ ಸಂತೋಷ ಶೆಟ್ಟಿ, ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಘಟನಾ ಸ್ಥಳ ಪರಿಶೀಲಿಸಿದರು.