ಬ್ಲಾಕ್ ಮೇಲ್ ಆರೋಪ: ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಉ.ಪ್ರ ಮೂಲದ ವ್ಯಕ್ತಿ

ಅಂಕೋಲಾ: ನನ್ನನ್ನು ಬ್ಲಾಕಮೇಲ್ ಮಾಡಲಾಗುತ್ತಿದೆ, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ಬೆಳಿಗ್ಗೆ ಪಟ್ಟಣದ ಕೋಟೆ ಮಾರುತಿ ದೇವಸ್ಥಾನದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಕಾಕರಮಠದ ಬಿಗ್ ಬಾಸ್ ಸಲೂನ್‌ನಲ್ಲಿ ಹೇರ್ ಕಟಿಂಗ್ ಕೆಲಸಕ್ಕಿದ್ದ ಉತ್ತರ ಪ್ರದೇಶ ಮೂಲದ ಸುಹೇಲ ಸಲಮಾನಿ (23) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ನಡೆದದ್ದೇನು.?

ಕಾಕರಮಠದ ಬಿಗ್ ಬಾಸ್ ಹೇರ್ ಕಟಿಂಗ್ ಸಲೂನ್ ನಲ್ಲಿ ಕಳೆದ 3 ವರ್ಷದಿಂದ ಸಲಮಾನಿ ಹಾಗೂ ಅವರ ಅಣ್ಣ ಸೇರಿ ಮೂವರು ಕೆಲಸಕ್ಕಿದ್ದರು. ಇವರು ಸಲೂನ್‌ನ ಮೇಲ್ಮಹಡಿಯಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ ಎಲ್ಲರೂ ಊಟ ಮಗಿಸಿ ಮಲಗಿದ್ದಾರೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಸುಲಮಾನಿ ರೂಂನಿಂದ ಹೊರ ನಡೆದು ಹೋಗಿದ್ದ ಎಂದು ಮೃತನ ಅಣ್ಣ ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಕೋಟೆ ಮಾರುತಿ ದೇವಸ್ಥಾನಕ್ಕೆ ಹೋದವರು ನೇಣು ಬಿಗಿದುಕೊಂಡು ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವಿಡಿಯೋ ಮಾಡಿ ಆತ್ಮಹತ್ಯೆ

ಮೊಬೈಲ್ ನಲ್ಲಿ ನನಗೆ ಗೊತ್ತಿಲ್ಲದೇ ಕದ್ದು ವಿಡಿಯೋ ಮಾಡಲಾಗುತ್ತಿತ್ತು. ಇದರಿಂದ ನಾನು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಮೂರು ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವೀಡಿಯೋದಲ್ಲಿ ಯಾವ ವಿಷಯದಲ್ಲಿ ಕದ್ದು ವಿಡಿಯೋ ಮಾಡಲಾಗುತ್ತಿತ್ತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲಾ.

ಪಿಎಸೈ ಮಹಾಂತೇಶ ಹಾಗೂ ಪ್ರವೀಣಕುಮಾರ ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿ ತನಿಖೆ ಕೈಗೊಂಡಿದ್ದಾರೆ. ಇನ್ನು ಸುಹೇಲ ಸಲಮಾನಿ ಆತ್ಮಹತ್ಯೆಗೆ ಬ್ಲಾಕ್ ಮೇಲ್ ಮಾಡಿದ ವಿಷಯ ಯಾವುದೆಂದು ಪೊಲೀಸ್ ತನಿಖೆಯಿಂದ ಬಯಲಿಗೆ ಬರಬೇಕಿದೆ.