ಅಂಕೋಲಾದಲ್ಲಿ ಸಂಭ್ರಮದಿಂದ ನಡೆದ ಶ್ರೀ ನಾರಾಯಣ ಗುರುಗಳ ಜಯಂತಿ

ಅಂಕೋಲಾ : ಕೇರಳದಲ್ಲಿ ಜಾತಿ ವ್ಯವಸ್ಥೆಯಿಂದ ಬಳಲಿ ಬೆಂಡಾಗಿರುವ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತವರು ಶ್ರೀ ನಾರಾಯಣ ಗುರುಗಳು. ಸಮಾನತೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಹೋರಾಟಗಾರ. ಈ ಮೂಲಕವಾಗಿ ದೇಶದಲ್ಲಿಯೇ ಮೌನ ಕ್ರಾಂತಿಯನ್ನು ಮಾಡಿದವರು. ಭಾರತವಲ್ಲದೇ ಹೊರ ದೇಶದಲ್ಲಿಯೂ ಕೂಡ ಇಂದು ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸುತ್ತಿರುವುದು ಶ್ಲಾಘನೀಯವಾದದ್ದು ಎಂದು ತಹಸೀಲ್ದಾರ್ ಅಶೋಕ ಭಟ್ ಹೇಳಿದರು.ತಾಲೂಕು ಆಡಳಿತದಿಂದ ಶ್ರೀ ನಾರಾಯಣ ಗುರುಗಳ 169ನೇ ಜಯಂತೋತ್ಸವ ಹಾಗೂ ಶರಣ ನುಲಿಯ ಚಂದಯ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ನುಲಿಯ ಚಂದಯ್ಯನವರು ವಚನಗಳನ್ನು ಸಂರಕ್ಷಿಸುವುದರಲ್ಲಿ ಕೊಡುಗೆ ನೀಡಿದ್ದಾರೆ ಎಂದರು.

ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಎಂ.ಪಿ.ನಾಯ್ಕ ಮಾತನಾಡಿ, ಶ್ರೀ ನಾರಾಯಣ ಗುರುಗಳು ಮನುಕುಲವನ್ನು ಒಂದೇ ಎನ್ನುವ ಸಾರಾಂಶವನ್ನು ತಿಳಿಸಿದವರು ಎಂದರು. ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಮಾತನಾಡಿ, ಶ್ರೀ ನಾರಾಯಣ ಗುರುಗಳು ಹಲವು ಪವಾಡಗಳ ಮೂಲಕ ಮನುಷ್ಯತ್ವವನ್ನು ಪ್ರತಿಯೊಬ್ಬರಲ್ಲಿಯೂ ಕಾಣುವಂತೆ ಮಾಡಿದವರು ಎಂದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಿ.ಜಿ.ನಾಯ್ಕ ಶ್ರೀ ನಾರಾಯಣಗುರು ಮತ್ತು ನುಲಿಯ ಚಂದಯ್ಯ ಕುರಿತು ಉಪನ್ಯಾಸ ನೀಡಿದರು. ಸಾಮಾಜಿಕ ಕಾರ್ಯಕರ್ತ ರಾಜೇಂದ್ರ ವಿ. ನಾಯ್ಕ ಮಾತನಾಡಿ, ನಾರಾಯಣ ಗುರುಗಳು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಅವರು ಇಡೀ ಮನುಕುಲ ಒಂದೇ ಎಂದು ಸಾರಿದ ಮಹಾತ್ಮರು ಎಂದರು.ನಾಮಧಾರಿ ಈಡಿಗ ನೌಕರರ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ., ಪಿಎಸ್‌ಐ ಉದ್ದಪ್ಪ ಮಾತನಾಡಿದರು.ತಾಲೂಕು ಆರೋಗ್ಯ ಅಧಿಕಾರಿ ಡಾ.ಜಗದೀಶ ನಾಯ್ಕ, ಸಿಡಿಪಿಓ ಸವಿತಾ ಮಠ, ನಿವೃತ್ತ ಗ್ರಂಥಪಾಲಕ ಮಹಾಂತೇಶ ರೇವಡಿ, ವಿವಿಧ ಸಂಘಟನೆಯ ಪ್ರಮುಖರಾದ ಮಾದೇವ ಎಂ. ನಾಯ್ಕ, ರಮೇಶ ಎನ್. ನಾಯ್ಕ, ಏಕನಾಥ ನಾಯ್ಕ, ಮಂಜುನಾಥ ಡಿ. ನಾಯ್ಕಮಂಜುಳಾ ನಾಯ್ಕ, ಸಂಜಯ ನಾಯ್ಕ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಉಪಾಧ್ಯಕ್ಷ ಉಮೇಶ ನಾಯ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಎಂ. ನಿರ್ವಹಿಸಿದರು. ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಿಂದ ನಾರಾಯಣಗುರು ಸ್ತಬ್ಧ ಚಿತ್ರದ ಮೆರವಣಿಗೆ ಮೂಲಕ ಆರಂಭಗೊಂಡ ಕಾರ್ಯಕ್ರಮ ತಹಸೀಲ್ದಾರ್ ಕಚೇರಿಯಲ್ಲಿ ವೇದಿಕೆ ಕಾರ್ಯಕ್ರಮದ ಮೂಲಕ ಕೊನೆಗೊಂಡಿತು.