ಜೋಯಿಡಾ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ

ಜೊಯಿಡಾ: ತಾಲೂಕಿನ ಪ್ರತಿಷ್ಠಿತ ಸೇವಾ ಸಹಕಾರಿ ಸಂಘ ಜೊಯಿಡಾದಿಂದ ರೈತರಿಗೆ ಬೆಳೆ ಸಾಲ ನೀಡದೇ ಇರುವುದರಿಂದ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷರಿಂದ ಸಹಕಾರಿ ಸಂಘಗಳ ನೊಂದಣಾಧಿಕಾರಿಯವರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಲಾಗಿದೆ. ಇದರಿಂದ ಸಂಘದಲ್ಲಿ ಪಿಗ್ಮಿ ಹಾಗೂ ಫಿಕ್ಸ್ ಡಿಪೋಸಿಟ್ ಹಣ ಇಟ್ಟವರಲ್ಲಿ ಆತಂಕ ನಿರ್ಮಾಣವಾಗಿದೆ. ಬೆಳೆ ಸಾಲ ಮತ್ತು ಎಲ್ಲಾ ಹಣ ವಾಪಸ್ ನೀಡುವಂತೆ ಆಗ್ರಹಿಸಲಾಗಿದೆ.

ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಕುಣಬಿ ಭವನದಲ್ಲಿ ಇಂದು ಭಾನುವಾರ ಸಂಜೆ ಬೆಳೆ ಸಾಲ ವಂಚಿತ ರೈತರು, ಪಿಗ್ಮಿ ಹಾಗೂ ಫಿಕ್ಸ್ ಡಿಪೋಸಿಟ್ ಹಣ ಇಟ್ಟವರ ಸಭೆಯನ್ನು ಕರೆಯಲಾಗಿತ್ತು.

ಜೊಯಿಡಾ ಸೇವಾ ಸಹಕಾರಿ ಸಂಘದಲ್ಲಿ 18೦೦ ಕ್ಕೂ ಹೆಚ್ಚು ಷೇರುದಾರರು ಇದ್ದಾರೆ. ಈ ಸಂಘದ ಮೂಲಕ ಅನೇಕ ರೈತರಿಗೆ ಪ್ರತಿ ವರ್ಷ ಬೆಳೆ ಸಾಲ ನೀಡಲಾಗುತ್ತಿತ್ತು. ಆದರೆ ಇತ್ತೀಚಿಗೆ ಬೆಳೆ ಸಾಲ ನೀಡದೇ ರೈತರು ಬೀಜ, ಗೊಬ್ಬರ ಖರಿದಿ ಮಾಡಲು ಸಾಧ್ಯವಾಗದೇ ತೊಂದರೆ ಪಟ್ಟಿದ್ದರು. ಹತ್ತಾರು ಬಾರಿ ಸುತ್ತಿದರೂ ನಾಳೆ ಬಾ ಎಂದು ಸಂಘದ ಮುಖ್ಯಕಾರ್ಯನಿರ್ವಾಹಕರು ಇಷ್ಟು ದೀನ ರೈತರನ್ನು ಕಾಡುತಿದ್ದರು. ರೈತರು ಅಸಮಾಧಾನಗೊಂಡು ಇಂದು ಕರೆದ ಸಭೆಗೆ ಆಡಳಿತ ಸಮಿತಿ ಅಧ್ಯಕ್ಷ ಮತ್ತು ಸಮಿತಿಯ ಸದಸ್ಯರು ಬಂದಿದ್ದರು. ಅನೇಕರು ಕೂಡಲೆ ಬೆಳೆಸಾಲ ನೀಡುವಂತೆ ಆಗ್ರಹಿಸಿದರು. ಇನ್ನು ಅನೇಕರು ಪಿಗ್ಮಿ ಮತ್ತು ಇಟ್ಟ ಹಣ ನೀಡುವಂತೆ ಆಡಳಿತ ಸಮಿತಿಯವರನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ರಮೇಶ ನಾಯ್ಕ ಅವರು ಮಾತನಾಡಿ ಇಲ್ಲಿತನಕ ರೈತರಿಗೆ ಬೆಳೆ ಸಾಲ ನೀಡದೇ ಇರುವುದು ತಪ್ಪು. ಈ ಬಗ್ಗೆ ತನಿಖೆ ಮಾಡುವಂತೆ ಎ.ಆರ್.ಓ ಮತ್ತು ಡಿ.ಆರ್.ಓ ಕಾರವಾರ ದೂರು ನೀಡಲಾಗಿದೆ. ಈ ಅವ್ಯವಹಾರ ಮುಖ್ಯ ಕಾರ್ಯನಿರ್ವಾಹಕರಿಂದ ನಡೆದಿದೆ. ನಮಗೇನು ಗೊತ್ತಿಲ್ಲ, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಸೇರಿದ ರೈತರು ಬೆಳೆಸಾಲ ನೀಡದೆ ಇರಲು ಕಾರಣ ಏನೆಂದು ಸಂಘದ ಕಾರ್ಯನಿರ್ವಾಹಕ ರಾಮ ನಾಯ್ಕ ಅವರಲ್ಲಿ ಪ್ರಶ್ನಿಸಿದರು. ಅವರು ಈ‌ ಏನನ್ನು ಉತ್ತರಿಸದೇ ಮೌನ ವಹಿಸಿದ್ದು, ರೈತರ ಆಕ್ರೊಶಕ್ಕೆ ಕಾರಣವಾಯ್ತು.

13 ಕೋಟಿಗೂ ಹೆಚ್ಚು ಹಣ ಅವ್ಯವಹಾರ ನಡೆದಿದೆ ಎಂದು ರೈತರು, ಷೇರುದಾರರು, ಪಿಗ್ಮಿ ತುಂಬಿದ ಅಂಗಡಿ ಮುಂಗಟ್ಟುಗಳ‌ ಮಾಲಿಕರು ಮತ್ತು ಠೇವಣಿ ಇಟ್ಟವರು ಸಭೆಯಲ್ಲಿ ನೇರ ಆರೋಪವನ್ನು ಮಾಡಿದ್ದರು.

ಈ ಸಂದರ್ಭದಲ್ಲಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಫಿಕ್ ಖಾಜಿ, ಮುಖಂಡರಾದ ರವಿ ರೆಡಕರ, ಪ್ರಮುಖರಾದ ಪಿ.ವಿ.ದೇಸಾಯಿ, ದೇವಿದಾಸ ದೇಸಾಯಿ, ಕೆ.ಎಲ್.ನಾಯ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಅರುಣ ಕಾಮ್ರೇಕರ, ಮಹಿಂದ್ರ ಹರ್ಚಿಲಕರ, ಗಾಂಗೋಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವಿಣ ದೇಸಾಯಿ, ದತ್ತಾ ಗಾವಡಾ, ತಾಲ್ಲೂಕು ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ಪ್ರಮುಖರಾದ ಪಾಂಡುರಂಗ ಗಾವಡಾ, ಉಮೇಶ್ ವೆಳಿಪ, ಬಾಳಾ ದೇಸಾಯಿ, ಸುರೇಶ ಗಾವಡಾ, ಗಜಾನನ ಬಾಂಡೋಳಕರ, ಗುಣೊ ಗಾವಡಾ, ಸುಬ್ರಾಯ ಹೆಗಡೆ, ದಿಲಿಪ ಗಾಂವಕರ ಮುಂತಾದವರು ಇದ್ದರು.