ಸಿದ್ದಾಪುರ : ಕೈಕೊಟ್ಟ ಮಳೆಯಿಂದಾಗಿ ರೈತರು ಕಂಗಾಲು

ಸಿದ್ದಾಪುರ : ಕೈಕೊಟ್ಟ ಮಳೆಯಿಂದಾಗಿ ರೈತರು ಕಂಗಾಲಾಗಿರುವ ಸ್ಥಿತಿ ಸಿದ್ದಾಪುರ ತಾಲೂಕಿನಲ್ಲಿ ಎದುರಾಗಿದೆ, ಗದ್ದೆ ನಾಟಿ ಯಾಗಿ ಹಸಿರು ಒಡೆಯುತ್ತಿರುವ ಹಂತಕ್ಕೆ ತಲುಪಬೇಕಾದಂತ ಈ ಸಂದರ್ಭದಲ್ಲಿ ನಾಟಿ ಮಾಡಿದ ಗದ್ದೆಗೆ ನೀರು ಇಲ್ಲದೆ ಭತ್ತದ ಸಸಿಗಳು ಒಣಗುತ್ತಿದ್ದು ಗದ್ದೆಗಳಲ್ಲಿ ಬಿರುಕು ಬಿಡಲಾರಂಬಿಸಿದೆ.
ಇದನ್ನ ಈ ದೃಶ್ಯ ನೋಡುತ್ತಿರುವ ರೈತರು ಈ ವರ್ಷದ ಕಥೆ ಏನು ಎನ್ನುವ ಆತಂಕಕ್ಕೆ ಒಳಗಾಗಿದ್ದಾರೆ.
ಆರಂಭದಲ್ಲಿಯೇ ಮಳೆಯು ಸರಿಯಾದ ಪ್ರಮಾಣದಲ್ಲಿ ಸುರಿಯದೆ ನಂತರ ದಿನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು ರೈತರು ಸಂತಸ ಗೊಂಡು ಗದ್ದೆ ನಾಟಿ ಆರಂಭಿಸಿದರು ಆದರೆ ಮತ್ತೆ ಮಳೆ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾರದ ಮಳೆಯ ನಡುವೆಯೂ ತಾಲೂಕಿನ ಹಲವಡೆ ಗದ್ದೆ ನಾಟಿ ಕಾರ್ಯ ಮುಂದುವರೆದಿದೆ, ನಮ್ಮ ಕೆಲಸ ನಾವು ಮಾಡುವುದು ಮಳೆ ಸುರಿಯುವುದು ಬೆಳೆ ಬರುವುದು ದೇವರ ಇಚ್ಛೆ ಎನ್ನುವ ಬೇಸರದ ನುಡಿಯೊಂದಿಗೆ ಕಾಯಕದಲ್ಲಿ ರೈತರು ತೊಡಗಿಕೊಂಡಿರುವ ದೃಶ್ಯ ಕೋಡ್ಕಣಿ ಹೋಬಳಿ ವ್ಯಾಪ್ತಿಯ ಕೆಲ ಕಡೆ ಕಂಡುಬರುತ್ತಿದೆ.