ನೌಕರರ ಸಂಘದ ತೇಜೋವಧೆ ಕ್ರಮ ಕೈಗೊಳ್ಳಿ; ಸಂಘದ ಮನವಿ

ಅಂಕೋಲಾ: ನೌಕರರ ಹಿತಕಾಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ವಿರುದ್ಧ ಆಧಾರ ರಹಿತವಾಗಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಂಕೋಲಾ ತಾಲ್ಲೂಕು ಘಟಕ ಒತ್ತಾಯಿಸಿದೆ.
ಗುರುವಾರ ಮನವಿ ಸಲ್ಲಿಸಿದ ಸಂಘಟನೆಯ ಪ್ರಮುಖರು, ಸಂಘಟನೆಯ ವಿರುದ್ಧ ಸುಳ್ಳು ಆರೋಪ ಮಾಡಿರುವ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 1920ಲ್ಲಿ ಸ್ಥಾಪನೆಯಾಗಿದ್ದು, ಸರ್ಕಾರಿ ಮಾನ್ಯತೆಯನ್ನು ಹೊಂದಿ ಸುಮಾರು 5.25 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ರಾಷ್ಟ್ರದಲ್ಲಿಯೇ ಮಾದರಿ ಸಂಘಟನೆಯಾಗಿದೆ. ಸಂಘವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಶಾಖೆಗಳನ್ನು ಹೊಂದಿದ್ದು, ರಾಜ್ಯಾದ್ಯಂತ 2೦೦೦ಕ್ಕೂ ಹೆಚ್ಚಿನ ವಿವಿಧ ವೃಂದ ಸಂಘಗಳ ಸಂಯೋಜನೆಯನ್ನು ಹೊಂದಿದೆ. ಹಿಂದಿನ ಹಲವಾರು ಅಧ್ಯಕ್ಷರುಗಳ ಶ್ರಮದಿಂದ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ.
ಪ್ರಸ್ತುತ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯವರ ಮಾರ್ಗದರ್ಶನದಲ್ಲಿ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳು ನೌಕರರ ಹಿತಕಾಯುವುದು, ಅವರ ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಜಿಲ್ಲೆ, ತಾಲೂಕು ಮತ್ತು ಯೋಜನಾ ಶಾಖೆಯ ಸಂಘಟನೆಗಳು ಹಾಗೂ ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರು ಯಾವುದೇ ಫಲಾಪೇಕ್ಷೆ ಇಲ್ಲದೇ ನೌಕರರ ಹಿತರಕ್ಷಣೆಗಾಗಿ ಹಾಗೂ ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ವೈಯಕ್ತಿಕ ಹಿತಾಸಕ್ತಿಯನ್ನ ಬದಿಗೊತ್ತಿ ಹಗಲು ರಾತ್ರಿಯೆನ್ನದೇ ಶ್ರಮಿಸಿದ್ದಾರೆ. ಆದರೆ, ಸಂಘಟನೆಯನ್ನು ದುಬರ್ಲಗೊಳಿಸುವ ದುರುದ್ದೇಶದಿಂದ ವಿವಿಧ ಇಲಾಖೆಯ ಕೆಲ ಅಧಿಕಾರಿಗಳು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿರುವುದೂ ಅಲ್ಲದೇ ದೂರಿನ ಪ್ರತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂಘಟನೆಯ ಘನತೆಗೆ ಮಸಿ ಬಳಿಯುವ ಕೆಲಸ ಮಾಡುವುದು ವಿಷಾದನೀಯ. ಸಂಘಟನೆ ಹಾಗೂ ಪದಾಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡಿರುವ ವಿವಿಧ ಇಲಾಖೆಯ ಐವರು ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಂಕೋಲಾ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ಎನ್ ನಾಯಕ, ಕಾರ್ಯದರ್ಶಿ ಗಣಪತಿ ನಾಯ್ಕ, ರಾಜ್ಯ ಪರಿಷತ್ ಸದಸ್ಯ ಜಗದೀಶ ಜಿ ನಾಯಕ ಹೊಸ್ಕೇರಿ, ಖಜಾಂಚಿ ಗಿರೀಶ ನಾಯಕ ,ಉಪಾಧ್ಯಕ್ಷರಾದ ಪ್ರಮೋದ ದೊಡ್ಮನೆ, ಕೃಷ್ಣಮೂರ್ತಿ ಮೇಗಲಮನೆ ಪದಾಧಿಕಾರಿಗಳಾದ ರಫೀಕ್ ಶೇಖ್, ರವಿ ಕೋಟೆಬಾವಿ, ರವಿ ನಾಯಕ, ಮೇಲಾಯುದ ನಾಯರ್ ತುಕಾರಾಮ ಬಂಟ, ಕಂದಾಯ ಇಲಾಖೆಯ ಅನುಪಮಾ ನಾಯ್ಕ, ಶೈಲೇಶ ನಾಯ್ಕ, ಗೀತಾ ನಾಯ್ಕ,ನಾಗಭೂಷಣ ನಾಯಕ,ಭಾವನಾ ಗಾಂವಕರ,ದೀಪ್ತಿ ನಾಯ್ಕ ಸೃಷ್ಟಿತಾ ನಾಯ್ಕ ,ವನಿತಾ ಗೌಡ, ಸುರಕ್ಷಾ ಕೇಣಿ, ವಿದ್ಯಾನಂದ ಗಾಂವಕರ ಮುಂತಾದವರು ಉಪಸ್ಥಿತರಿದ್ದರು. ಶಿರಸ್ತೇದಾರ ಗಿರೀಶ ಜಾಂಬಾವಳಿಕರ ಮನವಿ ಸ್ವೀಕರಿಸಿದರು.