ದುಬೈನಲ್ಲಿ ಒಳ್ಳೆ ಕೆಲಸ ಬಿಟ್ಟು ಊರಲ್ಲಿ ಪಾನಿಪುರಿ ಬಂಡಿಯಿಟ್ಟುಕೊಂಡು, ಬದುಕಿನ ಬಂಡಿ ಸಾಗಿಸುತ್ತಿರುವ ಮೆರೈನ್ ಎಂಜಿನಿಯರ್! ಕಾರಣವೇನು?

ವಿಜಯನಗರ, ಜುಲೈ 20: ವಿಜಯನಗರದ ಗಂಟ್ಯಾಡ ಮಂಡಲದ ಗಿಂಜೇರು ಗ್ರಾಮದ ದಾಸರಿ ವೇಣು ಅವರು ಚೆನ್ನೈನಲ್ಲಿ ಮೆರೈನ್ ಎಂಜಿನಿಯರಿಂಗ್ ಮಾಡಿದ್ದಾರೆ. ಸಮುದ್ರದೊಳಕ್ಕೆ ತೆರಳಿದ ಯಾವುದೇ ಹಡಗಿನ ಮಾರ್ಗ ಮಧ್ಯೆ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೂ ಶೀಘ್ರವಾಗಿ ಪರಿಹರಿಸುವಲ್ಲಿ ದಾಸರಿ ವೇಣು ನಿಪುಣರು. ಅವರು ಹಡಗಿನ 13 ಎಂಜಿನಿಯರುಗಳ ತಂಡದಲ್ಲಿ ಈತನೇ ಟಾಪರ್. ಯಾವುದೇ ತಾಂತ್ರಿಕ ಸಮಸ್ಯೆಯನ್ನು ನಿಭಾಯಿಸಬಲ್ಲನು. ಈತನ ಎಂಜಿನಿಯರಿಂಗ್ ಪ್ರತಿಭೆ ಗುರುತಿಸಿದ ತಕ್ಷಣ ದುಬೈನ ಮರೈನ್ ಕಂಪನಿಯೊಂದು ಉದ್ಯೋಗ ನೀಡಿತು. ಸಂಬಳವೂ 80 ಸಾವಿರ ರೂಪಾಯಿ. ಆದರ ಇತ್ತ ಮನೆಯಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುವ ತಂದೆಯ ಕಷ್ಟವನ್ನು ಕಂಡ ವೇಣು, ದುಬೈನಲ್ಲಿ ಸಿಕ್ಕ ಉದ್ಯೋಗದಿಂದ ಇನ್ನೆಂದೂ ಅಪ್ಪ ಕಷ್ಟಪಡಬಾರದು ಎಂದುಕೊಂಡ. ಕೆಲವು ದಿನಗಳ ನಂತರ ಆತ ಮದುವೆಯೂ ಆದ. ಕೆಲವು ವರ್ಷಗಳ ಕಾಲ ವೇಣುವಿನ ಜೀವನ ಸುಖಮಯವಾಗಿ ಸಾಗಿತು. ಅಷ್ಟರಲ್ಲಿ ಒಂದು ದಿನ ಹೆತ್ತಮ್ಮನಿಗೆ ಕ್ಯಾನ್ಸರ್ ಪಿಡುಗು ಗುಡುಗು ಸಿಡಿಲಿನಂತೆ ಬಡಿಯಿತು. ಕಿಮೊಥೆರಪಿ ಕಡ್ಡಾಯ ಎಂದು ವೈದ್ಯರು ತಿಳಿಸಿದರು.

ಮತ್ತೊಂದೆಡೆ ದಾಸರಿ ವೇಣು ಪತ್ನಿ ನಾಲ್ಕು ತಿಂಗಳ ಗರ್ಭಿಣಿ. ಅತ್ತ ತನ್ನ ಹೆತ್ತ ತಾಯಿಯ ದುಃಸ್ಥಿತಿ ಮತ್ತು ಹೆಂಡತಿಯನ್ನು ಇಂತಹ ಪರಿಸ್ಥಿತಿಯಲ್ಲಿ ನೋಡುವುದು ಆತನಿಗೆ ಬರಸಿಡಿಲಿನಂತೆ ಬಡಿದಿತ್ತು. ಅತ್ತ ಚೆನ್ನಾಗಿ ದುಡಿದು ಒಳ್ಲೆಯ ಸಂಬಳ ಗಳಿಸಿ, ಚೆನ್ನಾಗಿ ಬದುಕಬೇಕು ಅಂದು ಕೊಂಡಿದ್ದನಾದರೂ ಇದೀಗ ಬರಸಿಡಿಲಿನಂತೆ ಬಂದೆರಗಿರುವ ದುಃಸ್ಥಿತಿಯನ್ನು ಆತ ಜೀರ್ಣಿಸಿಕೊಳ್ಳದೇ ಹೋಗಿದ್ದಾನೆ. ಬಡ ಕುಟುಂಬವನ್ನು ಬಿಟ್ಟು ಹೋಗುವುದಕ್ಕೆ ಆತ ಒಪ್ಪಲಿಲ್ಲ.

ವೇಣು ಕೂಡಲೇ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ವಾಪಸಾಗಿದ್ದಾರೆ. ನಂತರ ಸುತ್ತಮುತ್ತಲಿನ ಊರುಗಳಲ್ಲಿ ಉದ್ಯೋಗಕ್ಕಾಗಿ ಕೆಲವು ವರ್ಷಗಳ ಕಾಲ ಪ್ರಯತ್ನಿಸಿದ್ದಾರೆ. ಎಲ್ಲೂ ಒಳ್ಳೆಯ ಕೆಲಸ ಸಿಗದ ಕಾರಣ ಅನಿವಾರ್ಯವಾಗಿ ಸಣ್ಣಪುಟ್ಟ ಉದ್ಯಮ ಆರಂಭಿಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಆತ ಪಾನಿಪುರಿ ಬಂಡಿಯನ್ನಿಟ್ಟುಕೊಂಡು ಬದುಕಿನ ಬಂಡಿ ದೂಡಲು ನಿರ್ಧರಿಸಿದ್ದಾನೆ.

ಆ ಥಾಟ್​ ಬಂದಿದ್ದೇ ತಡ.. ಅದಕ್ಕೆ ಬೇಕಾದ ಬಂಡವಾಳಕ್ಕೆ ಪತ್ನಿಯ ಕೊರಳಲ್ಲಿದ್ದ ಮಂಗಳಸೂತ್ರವನ್ನು ಗಿರವಿ ಇಟ್ಟು 30 ಸಾವಿರ ರೂಪಾಯಿ ಸಾಲ ಮಾಡಿ, ವ್ಯಾಪಾರ ಆರಂಭಿಸಿದ್ದಾರೆ. ವೇಣು ಇದೀಗ ದಿನವಿಡೀ ಪಾನಿಪುರಿ ಮತ್ತು ಚಾಟ್​ ಮಸಾಲಾ ಆಹಾರವನ್ನು ತಯಾರಿಸುತ್ತಾರೆ ಮತ್ತು ಸಂಜೆ ಅದನ್ನು ಮಾರಾಟ ಮಾಡುತ್ತಾರೆ. ಪಾನಿಪುರಿ ವ್ಯಾಪಾರದಲ್ಲಿ ಪತ್ನಿಯೂ ಇದೀಗ ಸಹಾಯ ಮಾಡುತ್ತಾರೆ.

ಒಂದು ಕಾಲದಲ್ಲಿ ಐಷಾರಾಮಿ ಕನಸು ಕಂಡಿದ್ದ ವೇಣು ಪಾನಿಪುರಿಯನ್ನು ಮಾರುವಾಗ ಆತನ ಗೆಳೆಯರು ಅದರ ಬಗ್ಗೆ ಅವಹೇಳನಕಾರಿಯಾಗಿ ನೋಡುತ್ತಾರಂತೆ. ಇದೇನು ನಿನ್ನ ಕರ್ಮವೋ ಎಂದು ಅವರು ಆತನನ್ನು ಹೀಯಾಳಿಸುತ್ತಾರಂತೆ. ಆದರೆ ಅವರ ಮಾತುಗಳನ್ನು ಲೆಕ್ಕಿಸದೆ, ವೇಣು ತಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿ ದುಡಿಯುತ್ತಿದ್ದಾರೆ. ಯಾರು ಏನೇ ಅಂದುಕೊಂಡರೂ ನನಗೇನಾಗಬೇಕಿದೆ? ನನ್ನ ಕೆಲಸ ನನ್ನದು, ನನ್ನ ದುಡಿಮೆ ನನ್ನದು ಎಂದು ವೇಣು ತಮ್ಮ ಊರಿನಲ್ಲಿ ಎಲ್ಲರ ನಡುವೆ ಪಾನೀಪೂರಿ ಮಾರುತ್ತಾ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.