ರಾಜ್ಯದಲ್ಲಿ ಭರ್ಜರಿ ಮಳೆ: ಕಳಸ-ಕುದುರೆಮುಖ-ಮಂಗಳೂರು ಹೆದ್ದಾರಿಯಲ್ಲಿ ಬಿರುಕು

ಚಿಕ್ಕಮಗಳೂರು (ಜು.06): ರಾಜ್ಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಆಗುತ್ತಿದ್ದು, ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಮೆಯ ಆರ್ಭಟ ಆರಂಭವಾಗಿದೆ. ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾದು ಹೋಗುವ ಕಳಸ-ಕುದುರೆಮುಖ-ಮಂಗಳೂರು ಸಂಪರ್ಕಿಸುವ ಹೆದ್ದಾರಿಯಲ್ಲಿ ಬಿರುಕು ಕಂಡುಬಂದಿದ್ದು, ಗುಡ್ಡ ಕುಸಿತದ ಆತಂಕ ಎದುರಾಗಿದೆ. 

ಕಾಫಿನಾಡು ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಇದರಿಂದಾಗಿ ಕಳಸ-ಕುದುರೆಮುಖ ರಸ್ತೆಯಲ್ಲಿ ಬಿರುಕು ಕಂಡುಬಂದಿದೆ. ಕಳಸದಿಂದ 1 ಕಿ.ಮೀ. ದೂರದಲ್ಲಿ ರಸ್ತೆ ಬಿರುಕು ಕಾಣಿಸಿಕೊಂಡಿದ್ದು, ಈಗ ವಾಹನ ಸವಾರರಿಗೆ ಆತಂಕ ಎದುರಾಗಿದೆ. ಕಳೆದ ವರ್ಷ ರಸ್ತೆ ಕುಸಿತ ಕಂಡಿದ್ದ ಸ್ಥಳದಲ್ಲಿಯೇ ಈ ವರ್ಷವೂ ಕೂಡ ರಸ್ತೆ ಬಿರುಕು ಕಾಣಿಸಿಕೊಂಡಿದೆ. ಇನ್ನು ರಸ್ತೆ ಕುಸಿಯದಂತೆ ಗೋಡೆ (ವಾಲ್) ನಿರ್ಮಾಣ ಮಾಡಲಾಗಿತ್ತು. ಆದರೆ, ಈಗ ಕಾಮಗಾರಿ ನಡೆದ ಸ್ಥಳದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಗೋಡೆ ಸಮೇತವೇ ಕುಸಿಯುವ ಆತಂಕ ಎದುರಾಗಿದೆ.

ತಡೆಗೋಡೆ ನಿರ್ಮಿಸಿದ ಜಾಗದಲ್ಲಿಯೇ ಮತ್ತೆ ಬಿರುಕು: ಇನ್ನು ರಸ್ತೆಯ ಪಕ್ಕದಲ್ಲಿ ಮಣ್ಣು ಕುಸಿಯದಂತೆ ನಿರ್ಮಿಸಿದ ಗೋಡೆಯೇ ಈಗ ಕುಸಿಯುತ್ತಿದೆ. ಒಂದು ವೇಳೆ ತಡೆಗೋಡೆ ಕುಸಿತ ಉಂಟಾದಲ್ಲಿ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಇನ್ನು ರಸ್ತೆ ಬಿರುಕಿನಿಂದ ವಾಹನ ಸವಾರರಲ್ಲಿ ಆತಂಕ ಎದುರಾಗಿದೆ. ಕಳಸ- ಕುದುರೆಮುಖ- ಮಂಗಳೂರು ಸಂಪರ್ಕಿಸುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಆದರೆ, ರಸ್ತ ಕುಸಿತವಾದಲ್ಲಿ ಅನಿವಾರ್ಯವಾಗಿ ರಸ್ತೆಯ ಸಂಚಾರವನ್ನು ಬಂದ್‌ ಮಾಡಲಾಗುತ್ತದೆ. ಮತ್ತೊಂದೆಡೆ ಮಳೆ ಮುಂದುವರೆದು, ರಸ್ತೆ ಕುಸಿತ ಉಂಟಾದಲ್ಲಿ ವಾಹನ ಸಂಚಾರಕ್ಕೆ ದೊಡ್ಡ ಮಟ್ಟದಲ್ಲಿ ಸಮಸ್ಯೆ ಎದುರಾಗಕಿದೆ.