43 ವರ್ಷಗಳ ಹಿಂದಾದ ಆ ಘಟನೆ ಸುಧಾಮೂರ್ತಿ, ನಾರಾಯಣ ಮೂರ್ತಿ ಬದುಕನ್ನೇ ಬದಲಿಸಿತು!

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅಂದರೆ ದೇಶ ಮಾತ್ರ ಅಲ್ಲ ಇದೀಗ ಅವರಿಗೆ ವಿದೇಶಗಳಲ್ಲೂ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಸಾಮಾನ್ಯ ದೃಷ್ಟಿಯಲ್ಲಿ ನೋಡಿದರೆ ಸುಧಾಮೂರ್ತಿ ಅವರದು ಈಗ ಬಂಗಾರದಂಥಾ ಲೈಫು. ಇಂಗ್ಲೆಂಡ್‌ ಪ್ರಧಾನಿಯೇ ಅವರ ಅಳಿಯ, ಮಗನೂ ಉತ್ತಮ ಸ್ಥಾನದಲ್ಲಿದ್ದಾರೆ. ಸುಧಾ ಮಾತ್ರ ಅಲ್ಲ, ಅವರ ಪತಿ ಇನ್‌ಫೋಸಿಸ್ ಮೂಲಕ ದೇಶದಲ್ಲಿ ಐಟಿ ಶಕೆ ಆರಂಭಿಸಿದ ನಾರಾಯಣ ಮೂರ್ತಿ ಅಂದರೆ ಇಡೀ ದೇಶವೇ ಗೌರವಿಸುತ್ತದೆ. ಲೈಫು ಇಷ್ಟು ಚೆನ್ನಾಗಿದೆ, ಆರಾಮವಾಗಿ ಲೈಫನ್ನು ಎಂಜಾಯ್ ಮಾಡಬಹುದಲ್ಲಾ ಅನ್ನೋದು ಹಲವರ ಮನಸ್ಸಿಗೆ ಬಂದಿರಬಹುದು. ಆದರೆ ಎಲ್ಲವೂ ಇದ್ದರೂ ಇಲ್ಲದವರ ಕಷ್ಟಕ್ಕಾಗಿ ಇಂದು ಸುಧಾಮೂರ್ತಿ ಶ್ರಮಿಸುತ್ತಿದ್ದಾರೆ ಅಂದರೆ ಅದಕ್ಕೆ ಬಲವಾದ ಕಾರಣವೂ ಇದೆ. ಆ ಎರಡು ಕಾರಣಗಳಲ್ಲಿ ಒಂದು ಈ ದೇಶದ್ದಾದರೆ ಇನ್ನೊಂದು ವಿದೇಶದಲ್ಲಾದ ಒಂದು ಘಟನೆ. ಈ ಇಳಿ ವಯಸ್ಸಿನಲ್ಲೂ ಸುಧಾಮೂರ್ತಿ ಈ ಮಟ್ಟಿನ ನಿಸ್ವಾರ್ಥ ಸೇವೆ ಮಾಡಲು ಸ್ಫೂರ್ತಿ ನೀಡದ ಘಟನೆಗಳವು.

ಮೊದಲ ಘಟನೆ ನಡೆದದ್ದು ಸುಧಾ ಅವರ ಮೊದಲ ಮಹಿಳಾ ಇಂಜಿನಿಯರ್ ಆಗಿದ್ದಾಗಿನ ಘಟನೆ. ಇಂಜಿನಿಯರಿಂಗ್ ಪದವಿ ಮುಗಿಸಿದ್ದರು. ಆದರೆ ಕೆಲಸ ಎಲ್ಲೂ ಕೊಡಲಿಲ್ಲ. ದಿಟ್ಟ ಹೆಣ್ಣುಮಗಳು ಸುಧಾ ಆದದ್ದಾಗಲಿ ಅಂತ ನೇರ ಆರ್‌ಜೆಡಿ ಟಾಟಾ ಅವರಿಗೇ ಲೆಟರ್‌ ಬರೀತಾರೆ. ಲಿಂಗ ತಾರತಮ್ಯದ ಬಗ್ಗೆ ಹೇಳ್ತಾ ಟೆಲ್ಕೊನಂಥಾ ಸಂಸ್ಥೆಯಲ್ಲಿ ಮಹಿಳೆ ಅನ್ನೋ ಕಾರಣಕ್ಕೆ ತನ್ನನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದುದರ ಬಗ್ಗೆ ತಿಳಿಸುತ್ತಾರೆ. ‘ಟಾಟಾ ಅವರು 1900 ರಿಂದ ಭಾರತದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿದ್ದಾರೆ ಮತ್ತು ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಗೂ ಸಹ ಕಾರಣರಾಗಿದ್ದಾರೆ.

ಅದೃಷ್ಟವಶಾತ್, ನಾನು ಅಲ್ಲಿ ಅಧ್ಯಯನ ಮಾಡುತ್ತೇನೆ. ಆದರೆ ಟೆಲ್ಕೊದಂತಹ ಕಂಪನಿಯು ಲಿಂಗದ ಆಧಾರದ ಮೇಲೆ ಹೇಗೆ ತಾರತಮ್ಯ ಮಾಡುತ್ತಿದೆ ಎಂದು ನನಗೆ ಆಶ್ಚರ್ಯವಾಗಿದೆ” ಅಂತ ಬರೆದಿದ್ದರಂತೆ. ಆ ಪತ್ರ ಟಾಟಾ ಅವರಿಗೆ ಸೇರಿದ 10 ದಿನಗಳ ನಂತರ, ಟೆಲ್ಕೊದಲ್ಲಿ ಸಂದರ್ಶನಕ್ಕಾಗಿ ಸುಧಾ ಅವರನ್ನು ಕರೆಯಲಾಯಿತು. ಆ ಕೆಲಸಕ್ಕೆ ಸೇರುವ ಮೂಲಕ ಟೆಲ್ಕೋದಲ್ಲಿ ಕೆಲಸ ಮಾಡಿದ ಮೊದಲ ಮಹಿಳಾ ಇಂಜಿನಿಯರ್ ಅನ್ನೋ ಹೆಗ್ಗಳಿಕೆ ಸುಧಾ ಪಾತ್ರರಾಗ್ತಾರೆ. ನಾರಾಯಣ ಮೂರ್ತಿ ಅವರು ಇನ್‌ಫೋಸಿಸ್ ಆರಂಭಿಸಿದಾಗ ಈ ಕೆಲಸಕ್ಕೆ ಸುಧಾ ರಾಜೀನಾಮೆ ಕೊಡುತ್ತಾರೆ.

ಆಗ ಸುಧಾ ಅವರನ್ನು ಭೇಟಿಯಾದ ಆರ್‌ಜೆಡಿ ಟಾಟಾ, ‘ನೀವು ಜೀವನದಲ್ಲಿ ಯಶಸ್ವಿಯಾದಾಗ ನೀವು ಸಮಾಜಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಬೇಕು. ಏಕೆಂದರೆ ಈ ಸಮಾಜವು ನಮಗೆ ತುಂಬಾ ನೀಡುತ್ತದೆ, ಸಮಯ ಬಂದಾಗ ನಾವು ಅದನ್ನು ಸಮಾಜಕ್ಕೆ ಹಿಂತಿರುಗಿಸಬೇಕು’ ಎಂದರಂತೆ. ಈ ಕಾರಣಕ್ಕೆ ತಾನು ಹಾಗೂ ನಾರಾಯಣ ಮೂರ್ತಿ ಸಂಪತ್ತನ್ನು ಸಮಾಜಕ್ಕೆ ಹಂಚುತ್ತೇವೆ ಎನ್ನುತ್ತಾರೆ ಸುಧಾಮೂರ್ತಿ.

ಇನ್ನೊಂದು ಘಟನೆ 43 ವರ್ಷಗಳ ಕೆಳಗೆ ಘಟಿಸಿದ್ದು. ಕೆಲಸದ ಮೇಲೆ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ವಿದೇಶಕ್ಕೆ ತೆರಳುತ್ತಾರೆ. ಆಗ ಇವರು ಭಾರತೀಯರು, ಕಂದು ಚರ್ಮದವರು ಅನ್ನುವ ಕಾರಣಕ್ಕೆ ನಿರ್ಲಕ್ಚ್ಯಕ್ಕೆ ಒಳಗಾಗ್ತಾರೆ. ಆಗಲೇ ಈ ದಂಪತಿ ಅಂದುಕೊಂಡರಂತೆ. ವಿದೇಶದವರೂ ನಮ್ಮ ದೇಶದತ್ತ ತಿರುಗಿ ನೋಡುವ ಹಾಗೆ ಮಾಡಬೇಕು ಅಂತ. ಅದನ್ನು ಈ ದಂಪತಿ ಸಾಧಿಸಿಯೂ ಬಿಡುತ್ತಾರೆ. ಇಂದು ವಿದೇಶಕ್ಕೆ ಹೋದರೆ ಮೂರ್ತಿ ದಂಪತಿ ಮಾತ್ರವಲ್ಲ, ಭಾರತೀಯರಿಗೂ ಗೌರವ ಸಿಗುತ್ತಿದೆ ಎಂದರೆ ಅದರೆ ಇನ್‌ಫೋಸಿಸ್‌ ಕೂಡ ಒಂದು ಕಾರಣ ಅನ್ನೋದನ್ನು ನಾವು ಮರೆಯೋ ಹಾಗಿಲ್ಲ.