ಚಿತ್ರದುರ್ಗದಲ್ಲಿ 1 ಬಿರಿಯಾನಿ ಕೊಟ್ಟು ಮತಾಂತರ, ಶಾಂಕಿಂಗ್ ಹೇಳಿಕೆ ನೀಡಿದ ಕೇಂದ್ರ ಸಚಿವ

ಚಿತ್ರದುರ್ಗ (ಜೂ.19): ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸುವ ವಿಚಾರವಾಗಿ  ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ ಶೇ.90ರಷ್ಟು ಮತಾಂತರ ನಡೆಯುತ್ತಿದೆ. ತೆಲಂಗಾಣದಲ್ಲಿ ಶೇ.30ರಷ್ಟು ಮತಾಂತರ ನಡೆಯುತ್ತಿದೆ. ನನ್ನ ಮಾದಿಗ ಸಮಾಜದ ಜನರ ಮತಾಂತರ ನಡೆಯುತ್ತಿದೆ. ಚಿತ್ರದುರ್ಗದಲ್ಲಿ 1ಬಿರಿಯಾನಿ ಕೊಟ್ಟು ಮತಾಂತರ ಮಾಡ್ತಿದ್ದಾರೆ. ಬಡತನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಶೋಷಿತರನ್ನೇ ಟಾರ್ಗೆಟ್ ಮಾಡಿ‌ ಮತಾಂತರ ನಡೆಯುತ್ತಿದೆ. ಮತಾಂತರದಿಂದ ನಮ್ಮ ಐಡೆಂಟಿಟಿ ಸಾಧ್ಯವಾಗುತ್ತಿಲ್ಲ. ಬಲವಂತದ ಮತಾಂತರ ತಡೆಗೆ ಕಾನೂನು ನಾವು ರೂಪಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ವಿರುದ್ಧ ಹೋಗುವುದಾದರೆ ಹೋಗಲಿ ಎಂದಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯನ್ನು ಮುಸ್ಲಿಂರು ಸ್ವಾಗತಿಸಿದ್ದಾರೆ. ಸಂವಿಧಾನಕ್ಕೆ ಗೌರವ ಸಿಗುತ್ತದೆ, ಅಂಬೇಡ್ಕರ್ ಅಪೇಕ್ಷೆಯಾಗಿತ್ತು. ಕಾಂಗ್ರೆಸ್ ‘ಗ್ಯಾರಂಟಿ’ ಮೂಲಕ ಅಧಿಕಾರಕ್ಕೆ ಬಂದಿದೆ. ಸಿದ್ಧಾಂತದ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಮಾತು ಕೊಟ್ಟಂತೆ ರಾಜ್ಯದ ಜನರಿಗೆ ಅಕ್ಕಿ ನೀಡಬೇಕು. ಕೇಂದ್ರ ಅಕ್ಕಿ ಸ್ಟಾಕ್, ಉತ್ಪಾದನೆ ವರದಿ ಆಧರಿಸಿ ರಾಜ್ಯಗಳಿಗೆ ಅಕ್ಕಿ ನೀಡುತ್ತದೆ. ರಾಜ್ಯ ಸರ್ಕಾರದ ಬಳಿ ಯಾವ ರಿಪೋರ್ಟ್ ಇದೆಯೋ ಗೊತ್ತಿಲ್ಲ ಎಂದಿದ್ದಾರೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆ ಬಗ್ಗೆ ಕಿಡಿಕಾರಿದ ಅವರು, ಶಕ್ತಿ ಯೋಜನೆ ಬಗ್ಗೆ ರೆಡ್ ಬಸ್ ಎಂದು ವ್ಯಂಗ್ಯವಾಡಿದ್ದಾರೆ. ಕೆಲವೆಡೆ ಮಕ್ಕಳು, ತಾಯಂದಿರು ನೆಲಕ್ಕೆ ಬಿದ್ದಿದ್ದಾರೆ. ಚಾಲಕ , ನಿರ್ವಾಹಕರ ಜತೆ ಮಹಿಳೆಯರು ಜಗಳವಾಡುತ್ತಿದ್ದಾರೆ. ನಿಯಮ ಮೀರಿ ಸಾರಿಗೆ ಬಸ್ ಗಳಲ್ಲಿ ಸಂಚಾರ ನಡೆಸಲಾಗುತ್ತಿದೆ. ರಸ್ತೆಗಳ ಸ್ಥಿತಿ ಹೇಗಿದೆ, ಪುಣ್ಯ ಕ್ಷೇತ್ರಗಳ ವ್ಯವಸ್ಥೆ ಹೇಗಿದೆ ನೋಡಿಲ್ಲ. ಚಾಲಕ, ನಿರ್ವಾಹಕರಿಗೆ ಯಾವುದೇ  ಭದ್ರತೆ ಇಲ್ಲ. ಸಾರಿಗೆ ಬಸ್ ಗಳ ಕಂಡಿಷನ್ಸ್ ಹೇಗಿದೆ ಪರಿಶೀಲಿಸಿಲ್ಲ. ಭವಿಷ್ಯದ ಗತಿ ಏನೆಂಬುದರ ಬಗ್ಗೆ ಚಿಂತನೆ ಮಾಡಬೇಕು. 75 ವರ್ಷ ದೇಶದಲ್ಲಿ ಆಡಳಿತ ನಡೆಸಿದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.