ಅಂಕೋಲಾ: ಶಿಕ್ಷಣ ಪ್ರೇಮಿ ಶೇಷಗಿರಿ ಪಿಕಳೆ ಜಯಂತಿ

ಅಂಕೋಲಾ : ಶಿಕ್ಷಣತಜ್ಞ, ಹೋರಾಟಗಾರ, ಕವಿ, ಸಾಹಿತಿಯಾಗಿದ್ದ ಶೇಷಗಿರಿ ಪಿಕಳೆಯವರು ಅಂಕೋಲಾದಲ್ಲಿ ಅನೇಕರ ಬಾಳಿಗೆ ಸೂರನ್ನು ಕಟ್ಟಿಕೊಡುವಲ್ಲಿ ಪರೋಕ್ಷವಾಗಿ ಸೇವೆಸಲ್ಲಿಸಿ ಶೈಕ್ಷಣಿಕ ಕ್ರಾಂತಿ ಉಂಟು ಮಾಡಿದರು. ಪಿಕಳೆ ದಂಪತಿಗಳು ಹಾಗೂ ದಿನಕರ ದೇಸಾಯಿಯವರು ಅಂಕೋಲಾ ಶೈಕ್ಷಣಿಕ ಕ್ಷೇತ್ರದ ಮೂಲಸ್ಥಂಭಗಳಿದ್ದಂತೆ, ಒಂದು ವೇಳೆ ಎರಡು ದಿಗ್ಗಜರು ಇಲ್ಲದಿದ್ದಲ್ಲಿ ಅಂಕೋಲಾ ಹಿಂದುಳಿಯುತ್ತಿತ್ತು., ಆದ್ದರಿಂದ ಅವರ ಹೆಸರನ್ನು ಅಜರಾಮರಗೊಳಿಸಬೇಕಾಗಿದೆ ಎಂದು ನಿವೃತ್ತ ಮುಖ್ಯಪಾಧ್ಯಾಯರಾದ ನಾರಾಯಣ ಬಿ. ನಾಯಕ ಸೂರ್ವೆ ಹೇಳಿದರು.
ಅವರು ಕೆ. ಎಲ್. ಇ ಸಮೂಹ ಸಂಸ್ಥೆ ಆಯೋಜಿಸಿದ್ದ ಶೇಷಗಿರಿ ಪಿಕಳೆಯವರ 103ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪವನ್ನುಅರ್ಪಿಸಿ ಮಾತನಾಡುತ್ತಾ, ಇಂದಿನ ಸ್ಥಿತಿಯಲ್ಲಿ ಶೈಕ್ಷಣಿಕ-ಸಂಸ್ಥೆಗಳು ವಾಣಿಜ್ಯೀಕರಣಗೊಳ್ಳುತ್ತಿದ್ದು ಶೈಕ್ಷಣಿಕ ಭದ್ರತೆ ಇಲ್ಲ. ಆದರೆ ಪಿಕಳೆ ದಂಪತಿಗಳು ಬಡ ಮಕ್ಕಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮೂಹ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಡಿ.ಎಲ್. ಭಟ್ಕಳ ಅವರು, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದ ಅಂಕೋಲಾಕ್ಕೆ ಶೈಕ್ಷಣಿಕ ದೀಪವಾಗಿ ಶೇಷಗಿರಿ ಹಾಗೂ ಪ್ರೇಮ ಪಿಕಳೆಯವರು ಕೊಡುಗೆ ನೀಡಿದ್ದಾರೆ. ಅತ್ಯಂತ ಶಿಸ್ತಿನ ಸಿಪಾಯಿಯಾಗಿದ್ದ ಶೇಷಗಿರಿ ಪಿಕಳೆಯವರು ಬಡ ದೀನದಲಿತರಿಗಾಗಿ ಹಗಲಿರುಳು ಸೇವೆ ಸಲ್ಲಿಸಿದ ತ್ಯಾಗಿಗಳು ಎಂದರು.
ವಿ.ಕೆ ಹೈಸ್ಕೂಲ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯೋಧ್ಯಾಪಕಿ ನಾಗಮ್ಮ ಆಗೇರ ಸ್ವಾಗತಿಸಿದರು. ಉಪನ್ಯಾಸಕಿ ಜಯಾ ಗಾಂವಕರ ಪರಿಚಯಿಸಿದರು.ಶಿಕ್ಷಕ ರತೀಶ ನಾಯಕ ವಂದಿಸಿದರು. ವಿವಿಧ ಅಂಗ ಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿಗಳು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯರಾದ ಗೀತಾ ಗಾಂವಕರ ಸಾಂದರ್ಭಿಕವಾಗಿ ಮಾತನಾಡಿದರು.