ಶ್ರೀ ಕ್ಷೇತ್ರ ಘಾಟಿ ಬಳಿ ವೃದ್ಧೆಗೆ ಡಿಕ್ಕಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಮದುವೆ ಬಸ್

ದೇವನಹಳ್ಳಿ; ಚಾಲಕನ ನಿಯಂತ್ರಣ ತಪ್ಪಿ ಮದುವೆ ಬಸ್ ಪಲ್ಟಿಯಾದ ಭೀಕರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸಮೀಪ ನಡೆದಿದೆ. ಮಧುಗಿರಿ ತಾಲೂಕಿನ ಐಡಿಹಳ್ಳಿ ಗ್ರಾಮದಿಂದ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಬಂದಿದ್ದ ಮದುವೆ ಬಸ್, ನಿನ್ನೆ(ಜೂನ್ 07) ರಾತ್ರಿ ಮದುವೆ ಮುಗಿಸಿಕೊಂಡು ತೆರಳುವಾಗ ಘಟನೆ ಸಂಭವಿಸಿದೆ. ಸದ್ಯ ಅದೃಷ್ಟವಶಾತ್ ದೊಡ್ಡ ದುರಂತದಿಂದ ಪ್ರಯಾಣಿಕರು ಪಾರಾಗಿದ್ದಾರೆ.

ವೃದ್ದೆಯೊಬ್ಬರಿಗೆ ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳಲು ಅತಿವೇಗದಿಂದ ಬಸ್ ಚಲಾಯಿಸಿದ್ದು ಈ ವೇಳೆ ವಿದ್ಯುತ್ ಕಂಬಕ್ಕೆ ಗುದ್ದಿ ಏಕಾಏಕಿ ಮುಗುಚಿ ಬಿದ್ದಿದೆ. ಹನುಮಕ್ಕ(65), ಲಕ್ಷ್ಮೀದೇವಮ್ಮ (55), ಹನುಮಯ್ಯ (71) ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಇನ್ನೂ ಉಳಿದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಂಭೀರ ಗಾಯವಾದ ಪ್ರಯಾಣಿಕರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.