ಭಟ್ಕಳ: ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಮತ್ತು ಮಳೆಗಾಲದ ಮುಂಜಾಗ್ರತ ಕ್ರಮಗಳ ಬಗ್ಗೆ

ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಜೊತೆ ತುರ್ತು ಸಭೆ ನಡೆಸಿದ ರಾಜ್ಯ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಸೂಕ್ತ ಕ್ರಮವಹಿಸುವಂತೆ ಆದೇಶಿಸಿದರು.

ಮಳೆಗಾಲದ ತಾಲ್ಲೂಕಿನ ಮಣ್ಕುಳಿ, ಶಂಸುದ್ದೀನ್ ಸರ್ಕಲ, ರಂಗಿನಕಟ್ಟೆ ಶಿರಾಲಿ ಭಾಗಗಳಲ್ಲಿ ಈ ಭಾರಿ ಹೆದ್ದಾರಿಯಲ್ಲಿ ನೀರು ಹರಿದು ಹೋಗದೆ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಹಾನಿಯಾಗದಂತೆ ಸೂಕ್ತ ಚರಂಡಿ ವ್ಯವಸ್ಥೆ ಮಾಡುಕೊಡುವಂತೆ ತಿಳಿಸಿದರು.

ಕಳೆದ ಬಾರಿ ಮಳೆಗಾಲದಲ್ಲಿ ಸಂಭವಿಸಿದ ಅನಾಹುತ ಈ ಬಾರಿ ಮರುಸೃಷ್ಟಿಯಾಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಬೇಕು. ಅಲ್ಲಲ್ಲಿ ಅಗತ್ಯ ಜೀವರಕ್ಷಕ ಸಾಧನ ಮತ್ತೆ ಸಿಬ್ಬಂದಿಯನ್ನು ಇರಿಸಿ ಯಾವುದೇ ಪ್ರಾಣಹಾನಿ, ವಸ್ತುಹಾನಿಯಾಗದಂತೆ ನಿಗಾವಹಿಸಬೇಕು ಎಂದು
ತಿಳಿಸಿದರು.

ಜೂನ್ 1ರಿಂದ ಶಾಲಾ ಶೈಕ್ಷಣಿಕ
ವರ್ಷ ಆರಂಭವಾಗಲಿದ್ದು ಶಾಲೆ ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮವಹಿಸುವಂತೆ ತಿಳಿಸಿದರು. ಶಾಲೆಗಳಿಗೆ ಅಗತ್ಯ ಇರುವ ಮೂಲಭೂತ ಸೌಲಭ್ಯಗಳನ್ನು ತಕ್ಷಣವೇ ಒದಗಿಸುವಂತೆ ಆದೇಶಿಸಿದರು.

ಈ ಬಾರಿ ಮಳೆ ಬಾರದ ಕಾರಣ ಕುಡಿಯುವ ನೀರಿನ ಅಭಾವ ಕಾಡುತ್ತಿದ್ದು, ನೀರಿನ ಅಗತ್ಯ ಇರುವ ಕಡೆ ಆದ್ಯತೆಯ ಮೇರೆಗೆ ನೀರು ಪೂರೈಸಲು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.