ಕುಮಟಾ: ಸುಡು ಬಿಸಿಲಿಗೆ ಒಣಗಿದ ಜಲಮೂಲಗಳು


ಮೇ ತಿಂಗಳು ಕಳೆಯುತ್ತಾ ಬಂದರು ಮಳೆ ಬರುವ ಸಾಧ್ಯತೆ ಕಂಡು ಬರುತ್ತಿಲ್ಲ. ಸುಡುಬಿಸಿಲು ಜನರನ್ನು ಹೈರಾಣವಾಗಿಸಿದೆ. ಪ್ರತಿಯೊಂದು ಕಡೆಯಲ್ಲಿಯೂ ಕೆರೆಬಾವಿ ಬತ್ತಿದ್ದು, ಬೋರವೆಲ್‌ನಲ್ಲಿ ನೀರಿನ ಮಟ್ಟ ಕುಸಿದಿದೆ. ಒಂದು ಹನಿ ನೀರಿಗೆ ಜನರು, ಜಾನುವಾರು, ಪ್ರಾಣಿಪಕ್ಷಿಗಳು ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ.

ಅಪರೂಪಕ್ಕೆ ಎಂಬಂತೆ ಒಂದೆರಡು ಹನಿ ಮಳೆ ಬಿದ್ದಂತೆ ಆಗಿ ಬಾವಿಯಲ್ಲಿದ್ದ ನೀರು ಬತ್ತಿ ಹೋಗಿವೆ. ಮಳೆಯೇ ಬರದೆ ಕೆರೆ, ಬಾವಿ ಬಿಸಿಲಿನ ತಾಪಕ್ಕೆ ಬಿರುಕು ಬಿಟ್ಟಿದೆ. ತಾಲೂಕಿನ ಹೊನ್ನಾವರ ಪ.ಪಂಚಾಯತ್‌ ಟ್ಯಾಂಕರ್‌ ನೀರೇ ಅನಿವಾರ್ಯವಾಗಿದೆ. ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿಯೂ ಟ್ಯಾಂಕರ್ನಲ್ಲೆ ನೀರು ಪೂರೈಕ ಮಾಡಲಾಗ್ತಿದೆ. ಅನಂತವಾಡಿ, ಚಿತ್ತಾರ, ಇಡುಗುಂಜಿ, ಬಳಕೂರು, ಮಾಗೋಡು, ಕೋಡಾಣಿ, ಸಾಕ್ಕೋಡ, ಚಂದಾವರ, ಹೋಸಕುಳಿ, ಕಡತೋಕ, ಕಡ್ಲೆ, ಗ್ರಾ.ಪಂ ವ್ಯಾಪ್ತಿಯಲ್ಲಿ ನೀರಿನ ಕೊರತೆ ಉಂಟಾಗಿದ್ದು, ಟ್ಯಾಂಕರ್‌ ಮೂಲಕ ಮನೆ ಮನೆಗೆ ನೀರು ಪೂರೈಸುತ್ತಿದ್ದಾರೆ. ಕೆಲಸ ಕಾರ್ಯ ಬಿಟ್ಟು ಸರತಿ ಸಾಲಿನಲ್ಲಿ ನಿಂತು ನೀರಿಗಾಗಿ ಕಾಯಬೇಕಾಗಿದೆ.

ರಸ್ತೆ ಸಂಪರ್ಕ ಇರುವ ಕಡೆ ಗ್ರಾ.ಪಂ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಗ್ರಾಮೀಣ ಪ್ರದೇಶದ ಕೆಲವು ಕಡೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ವಾಹನ ಬರದೆ ಇರುವ ಕಡೆ ನೀರಿನ ಅಭಾವ ಉಂಟಾಗಿ 2 ತಿಂಗಳು ಕಳೇದರು, ಅಕ್ಕಪಕ್ಕದ ಮನೆಯ ಬಾವಿ, ಕೆರೆ, ಪಂಪಸೆಟ್‌ ನೀರನ್ನು ಅವಲಂಬಿಸಿಕೊಂಡಿದ್ದಾರೆ.