ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿರುವ ಶ್ರೀ.ನಾಗದೇವತಾ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಉತ್ಸವ

ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆವರಣದಲ್ಲಿರುವ ಶ್ರೀ.ನಾಗದೇವತಾ ದೇವಸ್ಥಾನದಲ್ಲಿ 37 ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವಕ್ಕೆ ಇಂದು ಶುಕ್ರವಾರ ಬೆಳಿಗ್ಗೆ ಚಾಲನೆಯನ್ನು ನೀಡಲಾಗಿದೆ.

ನಿನ್ನೆ ರಾತ್ರಿಯಿಂದಲೆ ವಿವಿಧ ಪೂಜಾರಾಧನೆಗಳನ್ನು ಆಯೋಜಿಸಲಾಗಿತ್ತು. ಇಂದು ಬೆಳಿಗ್ಗೆಯಿಂದ ನಾಗದೇವರಿಗೆ ವಿಶೇಷ ಪೂಜೆ, ಹೋಮ, ಹವನ ಇನ್ನಿತರ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗುತ್ತಿದೆ. ಕಾರ್ಖಾನೆಯೊಳಗಡೆ ಕಾರ್ಮಿಕರಿಂದ ಹಿಡಿದು ಕಾರ್ಖಾನೆಯ ಆಡಳಿತ ಮಂಡಳಿಯ ಅತ್ಯಂತ ಶ್ರದ್ಧಾಭಕ್ತಿಯ ಕೇಂದ್ರವಾಗಿ ಈ ನಾಗದೇವತಾ ದೇವಸ್ಥಾನ ರೂಪುಗೊಂಡಿರುವುದನ್ನು ಗಮನಿಸಬಹುದು.

ಪೂಜಾ ಕಾರ್ಯಕ್ರಮದಲ್ಲಿ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್, ಕಾಗದ ಕಾರ್ಖಾನೆಯ ಅಧಿಕಾರಿಗಳಾದ ರವಿ ಗೌತಮ್, ದಿನೇಶ್ ರಾವ್, ರಾಜೇಶ್ ತಿವಾರಿ ಸೇರಿದಂತೆ ಕಾದಗ ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿಗಳು, ನಗರ ಸಭಾ ಸದಸ್ಯ ಮೋಹನ ಹಲವಾಯಿ ಹಾಗೂ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ವಾರ್ಷಿಕ ವರ್ಧಂತಿ ಉತ್ಸವವು ನಾಳೆ ಸಂಪನ್ನಗೊಳ್ಳಲಿದೆ.