ಅಂಕೋಲಾ ತಾಲೂಕಿನ ಹಟ್ಟಿಕೇರಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಣಿಸಿಕೊಂಡ ಬಿರುಕು : ನವ ದೆಹಲಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡದಿಂದ ಪರಿಶೀಲನೆ

ಅಂಕೋಲಾ :ತಾಲೂಕಿನ ಹಟ್ಟಿಕೇರಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಬಿರುಕು ಕಾಣಿಸಿಕೊಂಡ ಸೇತುವೆಯನ್ನು ನವ ದೆಹಲಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ದೆಹಲಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗಾ ಗೌಡ, ವಿಶೇಷ ಪರಿಣಿತ ಅಧಿಕಾರಿಗಳಾದ ಶ್ರೀವಾತ್ಸವ, ಸುಬ್ಬರಾವ, ಬೆಂಗಳೂರಿನ ಸೈನ್ಸ್ ಇನ್ಸ್ಟಿಟ್ಯೂಟ್‌ನ ಚಂದ ಕಿಶನ್, ಯೋಜನೆಯ ಸಿ.ಎಮ್.ಎಮ್, ಎನ್.ಕೆ.ಜೈನ್, ವಿವೇಕ ಜಯಂ ಒಳಗೊಂಡ ತಂಡವು ಸೋಮವಾರ ಸಂಜೆ 5-30 ಕ್ಕೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿತು.

ಈ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇತುವೆಯ ಗುಣಮಟ್ಟವನ್ನು ಏಕೆ ಪರಿಶೀಲಿಸಿಲ್ಲ ಎಂದು ಐಆರ್‌ಬಿ ಅಧಿಕಾರಿಗಳಲ್ಲಿ ಕೇಳಿದಾಗ, ಈ ಸೇತುವೆಯ ನಿರ್ಮಾಣವನ್ನು 1965 ಮಾಡಲಾಗಿದೆ. ಚತುಷ್ಟತ ಯೋಜನಾ ನಿರ್ಮಾಣದ ಯೋಜನೆಯಲ್ಲಿ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡುವ ಬಗ್ಗೆ ಉಲ್ಲೇಖಗಳಿರಲಿಲ್ಲ. ರಸ್ತೆಯ ಸಾಮರ್ಥ್ಯದ ದಾರಣ ಶಕ್ತಿ ಅಧ್ಯಯನವಾದ ಮೇಲೆ ನಮಗೆ ಯೋಜನೆಯ ಮಂಜೂರು ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಸೇತುವೆಯ ದಾರಣ ಸಾಮರ್ಥ್ಯ 150 ಟನ್ ಇದೆ. ಆದರೆ ಗುಜರಾತದಿಂದ ಗೋವಾಕ್ಕೆ 315 ಟನ್ ಟ್ರಾನ್ ಪಾರ್ಮರ್ ಸಾಗಿಸಲು ಗುತ್ತಿಗೆ ಪಡೆದಿರುವ ಲಾಜಿಸ್ಟಿಕ್ ಕಂಪನಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೆಚ್ಚುವರಿಯಾಗಿ ಸರಕು ಸಾಗಿಸಲು ಲಕ್ಷಾಂತರ ರೂ ದಂಡದ ತೆರಿಗೆ ನೀಡಿ, ಪರವಾನಿಗೆ ಪಡೆದುಕೊಂಡೆ ಸಾಗಿಸಲಾಗುತ್ತಿತ್ತು ಎಂದು ಲಾಜಿಸ್ಟಿಕ್ ಕಂಪನಿಯ ಮಾಲಕರು ತಮ್ಮ ದಾಖಲೆಯನ್ನು ನೀಡಿದರು.

ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ನೀಡಿ ವಾಹನವನ್ನು ನಿಲ್ಲಿಸಿಡುವದು ಅಪರಾಧವಾಗುತ್ತದೆ. 10 ಕೋಟಿ ಮೌಲ್ಯದ ಈ ಯಂತ್ರವನ್ನು ನಿಗಧಿತ ಅವಧಿಯಲ್ಲಿ ಸಾಗಿಸಲು ಕರಾರನ್ನು ಗೋವಾ ಸರಕಾರದೊಂದಿದೆ ಮಾಡಲಾಗಿದೆ. ಇದರಿಂದ ಕಂಪನಿಗೆ ಹಾನಿಯಾದಲ್ಲಿ, ವಾಹನವನ್ನು ತಡೆ ಹಿಡಿದು ನಿಲ್ಲಿಸಿದ ಸಂಬಂದ ಪಟ್ಟವರ ಮೇಲೆ ಹಾನಿ ಭರಿಸಲು ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಸರಕು ಸಾಗಾಣಿಕಾ ಕಂಪನಿಯ ಮುಖ್ಯಸ್ಥರು ಎಚ್ಚರಿಸಿದ ಘಟನೆಯು ನಡೆಯಿತು.

ಪರಿಣಿತ ತಂಡವು ದೋಣಿಯಲ್ಲಿ ಸಾಗಿ ಪರಿಶೀಲನೆ ನಡೆಸಿತು. ವಿಶೇಷವಾದ ಅಧ್ಯಯನದ ತಾಂತ್ರಿಕ ಯಂತ್ರ, ಜಪಾನಿಂದ ವಿಶೇಷವಾಗಿ ಆಮದು ಮಾಡಿಕೊಂಡ ಬ್ರಿಡ್ಜ್ ಬಿಯರಿಂಗ್ ಡಿಟೆಕ್ಟರ್ ಅಳವಡಿಸಿ ಅಧ್ಯಯನ ನಡೆಸಿತು. 5 ಅಧಿಕಾರಿಗಳಿರುವ ತಂಡದಲ್ಲಿ ಸುಮಾರು 25 ಕ್ಕೂ ಸಹಾಯಕ ಪರಿಣಿತರು ಜೊತೆಯಾದರು.