ನಿಮ್ಮೆಲ್ಲರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇನೆ, ಜನರ ನಿರೀಕ್ಷೆ ನಾನು ಹುಸಿಯಾಗಿಸಿಲ್ಲ: ರೂಪಾಲಿ ನಾಯ್ಕ

ಕಾರವಾರ: ನಿಮ್ಮೆಲ್ಲರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇನೆ, ಜನರ ನಿರೀಕ್ಷೆ ನಾನು ಹುಸಿಯಾಗಿಸಿಲ್ಲ ಎಂದು‌ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಹೇಳಿದರು.

ಕಾರವಾರ ನಗರದ ವಿವಿಧ ವಾರ್ಡ್‌ಗಳಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ನಡೆಸಿ ಅವರು ಮಾತನಾಡಿದರು.

ಕಾರವಾರ ಹಿಂದೆಂದಿಗಿಂತಲೂ ಅತ್ಯಂತ ಶಾಂತವಾಗಿದೆ. ನಾನು ಶಾಸಕಿಯಾಗಿ ಅಧಿಕಾರವಹಿಸಿಕೊಳ್ಳುವ ಮೊದಲು ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅಶಾಂತಿ ಹಾಗೂ ಭಯದ ವಾತಾವರಣವಿತ್ತು ಈಗ ಹಾಗಿಲ್ಲ ಎಂದರು. ತಾವೆಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟು ಹಿಂದಿನ ಚುನಾವಣೆಯಲ್ಲಿ ಮತ ಚಲಾಯಿಸಿ ನನ್ನನ್ನು ಆಯ್ಕೆ ಮಾಡಿದ್ದಿರಿ ಈ ಆಯ್ಕೆಗೆ ನಾನು ಮೋಸ ಮಾಡಿಲ್ಲ ಎಂಬ ನಂಬಿಕೆ ನನಗಿದೆ. ಮುಂದೆಯೂ ಸಹ ನನಗೆ ನಿಮ್ಮ ಸಂಪೂರ್ಣ ಬೆಂಬಲವಿದೆ ಎಂದು ನಂಬಿದ್ದೇನೆ. ಯಾವೊಬ್ಬರೂ ತಮ್ಮ ಜೀವನದ ಅತ್ಯಮೂಲ್ಯ ಮತದಾನದ ಹಕ್ಕನ್ನು ವ್ಯರ್ಥ ಮಾಡದೇ ಪ್ರತಿಯೊಬ್ಬರೂ ಭಾರತೀಯ ಜನತಾ ಪಕ್ಷಕ್ಕೆ ಮತ ಚಲಾಯಿಸಿ ಮತ್ತೊಮ್ಮೆ ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಮತಯಾಚನೆ ಮಾಡಿದರು.

ಜನರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಜೀ ನೇತೃತ್ವದ ಹಾಗೂ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್‌ಇಂಜಿನ್‌ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರಿಗೆ, ಕಾರ್ಮಿಕರಿಗೆ, ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ನಮ್ಮ ಸರ್ಕಾರ ಶ್ರಮಿಸಿದೆ ಎಂದರು.

ನಗರದಲ್ಲಿ ವಿವಿಧ ಕಾರ್ಯಗಳನ್ನು ಮಾಡಿದ್ದೆನೆ. ನಾವು ನೀವೆಲ್ಲ ಆಡಿ ಬೆಳೆದ ಮೈದಾನದ ಅಭಿವೃದ್ಧಿ, ಕಲಿತ ಶಾಲಾ ಕಾಲೇಜುಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಮಹಿಳಾ ಕಾಲೇಜು ನಿರ್ಮಾಣ ಕಾರ್ಯ ಸಾಗುತ್ತಿದೆ. ರಸ್ತೆ, ಸಮುದಾಯ ಭವನ ಹೀಗೆ ಬೇರೆ ಬೇರೆ ಕಾರ್ಯಗಳನ್ನು ಮಾಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷರಾದ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷರಾದ ಶ್ರೀ ಪಿ.ಪಿ. ನಾಯ್ಕ, ಬಿಜೆಪಿ ಕಾರವಾರ ನಗರ ಮಂಡಲದ ಅಧ್ಯಕ್ಷರಾದ ಶ್ರೀ ನಾಗೇಶ ಕುರ್ಡೇಕರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮನೋಜ ಬಾಂದೇಕರ, ನಗರಸಭೆ ಸದಸ್ಯರಾದ ಪ್ರೇಮಾನಂದ ಗುನಗಾ, ರೋಷನಿ ಮಾಳಸೇಕರ, ಮಾಲಾ ಹುಲಸ್ವಾರ, ಶಿಲ್ಪಾ ನಾಯ್ಕ, ಅನುಶ್ರೀ ಕುಬಡೆ, ಉಲ್ಲಾಸ ಕೇಣಿ, ಹನುಮಂತ ತಳವಾರ, ರವಿರಾಜ ಅಂಕೋಲೆಕರ, ಪಕ್ಷದ ಪ್ರಮುಖರಾದ ರಾಜೇಶ್ ನಾಯಕ, ನಯನಾ ನೀಲಾವರ, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.