ಛತ್ತೀಸ್​ಗಢ ಸರ್ಕಾರದಿಂದ ವಿನೂತನ ಯೋಜನೆ.! ಸರ್ಕಾರಿ ಕಟ್ಟಡಗಳಿಗೆ ಸಗಣಿಯಿಂದ ತಯಾರಿಸಿದ ಪೇಂಟ್ ಬಳಕೆ.!

ಛತ್ತೀಸ್​ಗಢ: ಸರ್ಕಾರಿ ಕಟ್ಟಡಗಳಿಗೆ ಸಗಣಿಯಿಂದ ತಯಾರಿಸಿದ ಪೇಂಟ​ನ್ನು ಬಳಿಯಲು ಇಲ್ಲಿನ ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಪರಿಸರ ಉಳಿಸಲು ವಿಭಿನ್ನ ಹಾಗೂ ಪರಿಸರ ಸ್ನೇಹಿ ಪ್ರಯತ್ನವನ್ನು ಸರ್ಕಾರ ಕೈಗೊಂಡಿದೆ. ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಗೋವಿನ ಸಗಣಿಯಿಂದ ತಯಾರಿಸಿದ ಪೇಂಟ್​ ಬಳಸಲಾಗುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶ ಹಾಗೂ ಮಹಿಳೆಯರ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ.

ಸಗಣಿ ಬಳಸಿ ತಯಾರಿಸಿದ ಪೇಂಟ್​ನಲ್ಲಿ ಕೀಟನಾಶಕಗಳು ಇರುವುದರಿಂದ ವೈಜ್ಞಾನಿಕವಾಗಿಯೂ ಇದು ಸಹಾಯ ಮಾಡುತ್ತದೆ. 2021 ರಲ್ಲಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಖಾದಿ ಪ್ರಕೃತಿಕ ಪೇಂಟ್​ ಯೋಜನೆಯನ್ನು ಪ್ರಾರಂಭಿಸಿದ್ದರು. ಈ ಯೋಜನೆಯಿಂದ ದೇಶದಲ್ಲೇ ಮೊದಲ ಬಾರಿಗೆ ಹಸುವಿನಿಂದ ತಯಾರಿಸಿದ ಪೇಂಟ್ ಪರಿಚಯಿಸಲಾಗಿತ್ತು.

ರಾಯ್​ಪುರ್​ ಹಾಗೂ ಕನ್​ಕೇರ್​ನಲ್ಲಿ ಸಗಣಿ ಬಳಸಿ ಬಣ್ಣ ತಯಾರಿಸುವ ಘಟಕಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸಲಾಗುತ್ತಿದೆ. 2023 ರ ಜನವರಿ ವೇಳೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಸಗಣಿಯಿಂದ ಪೇಂಟ್​ ತಯಾರಿಸುವ ತಂತ್ರಜ್ಞಾನ ವಿಸ್ತರಿಸಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಈ ಹೊಸ ಬಣ್ಣದಲ್ಲಿ ಕಾರ್ಬಾಕ್ಸಿ ಮೀಥೈಲ್​ ಸೆಲ್ಯುಲೋಸ್​ ಮುಖ್ಯವಾದ ವಸ್ತುವಾಗಿದ್ದು, 100 ಕೆ.ಜಿ. ಗೋವಿನ ಸಗಣಿಯಿಂದ 10 ಕೆ.ಜಿ ಒಣ ಕಾರ್ಬಾಕ್ಸಿಮೀಥೈಲ್​ ಸೆಲ್ಯುಲೋಸ್ ತಯಾರಿಸಿ ಅದರ ಮೂಲಕ ಬಣ್ಣ ತಯಾರಿಸುತ್ತಾರೆ. ಒಟ್ಟಾರೆ ಬಣ್ಣದಲ್ಲಿ ಶೇ.30 ರಷ್ಟು ಪಾಲು ಕಾರ್ಬಾಕ್ಸಿಮೀಥೈಲ್​ ಸೆಲ್ಯುಲೋಸ್​ನದ್ದಾಗಿರುತ್ತದೆ.