ಮುರ್ಡೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಯನ್ನು ಜಾರಿ ಮಾಡುವಂತೆ ಹಿಂದೂ ಸಂಘಟನೆಗಳಿಂದ ಆಗ್ರಹ.!

ಭಟ್ಕಳ: ವಿಶ್ವ ಪ್ರಸಿದ್ಧ ಮುರ್ಡೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಯನ್ನು ಜಾರಿ ಮಾಡುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ಸಂಘಟನೆಗಳಿಂದ ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಮುರ್ಡೇಶ್ವರ ದೇವಸ್ಥಾನವು ಉತ್ತರಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲೊಂದಾಗಿದೆ. ಭಕ್ತರು ಬೇಡಿದ್ದನ್ನು ಈಡೇರುಸುತ್ತಾನೆಂಬ ನಂಬಿಕೆ ಇರುವ  ಮುರ್ಡೇಶ್ವರ ದೇವಸ್ಥಾನವು ಒಂದು ಕಾರಣಿಕ ಸ್ಥಳವಾಗಿದ್ದು, ಅತ್ಯಂತ ಪವಿತ್ರ ಹಾಗೂ ಸಮಾಜಕ್ಕೆ ಚೈತನ್ಯವನ್ನು ನೀಡುವ ಪುಣ್ಯಕ್ಷೇತ್ರವಾಗಿದೆ. ದೇವಸ್ಥಾನದ ಪಾವಿತ್ರ್ಯವನ್ನು ಉಳಿಸಿಕೊಂಡಾಗ ಮಾತ್ರ ಅಲ್ಲಿರುವ ದೇವತ್ವದ ಅನುಭವವನ್ನು ಪಡೆಯಬಹುದು.

ಹಿಂದೂ ಸಂಸ್ಕೃತಿಯ ಪ್ರಕಾರ ಉಡುಪುಗಳನ್ನು ಧರಿಸುವುದರಿಂದ ಈಶ್ವರಿ ಚೈತನ್ಯದ ಲಾಭವಾಗುತ್ತದೆ ಮತ್ತು ದೇವತೆಯ ತತ್ವದ ಅನೂಭೂತಿ ಬರುತ್ತದೆ. ಪಾಶ್ಚಾತ್ಯ ಉಡುಪುಗಳನ್ನು ಧರಿಸುವುದರಿಂದ ಮತ್ತು ಕೂದಲೂ ಬಿಚ್ಚಿಟ್ಟುಕೊಳ್ಳುವುದರಿಂದ ಕೆಟ್ಟ ಶಕ್ತಿಗಳಿಗೆ ಆಮಂತ್ರಣ ನೀಡಿದಂತಾಗುತ್ತದೆ. ವಿದೇಶಿ ಸಂಸ್ಕೃತಿಯ ರಜ-ತಮ ಪ್ರಧಾನ ಉಡುಪುಗಳಿಂದ ದೇವಸ್ಥಾನದ ಸಾತ್ವಿಕತೆಗೆ  ಭಂಗ ಉಂಟಾಗಿ ಭಾವಿಕ ಭಕ್ತರು ದೈವಿ ಚೈತನ್ಯದ ಪೂರ್ಣ ಲಾಭ ಪಡೆಯುವುದರಿಂದ ವಂಚಿತರಾಗುತ್ತಾರೆ.

ಅತ್ಯಂತ ಪವಿತ್ರ ಹಾಗೂ ಚೈತನ್ಯಮಯ ನಮ್ಮ ದೇವಸ್ಥಾನಗಳಲ್ಲಿ ಅವುಗಳ ಪಾವಿತ್ರ್ಯ ಮತ್ತು ಆಧ್ಯಾತ್ಮಿಕ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತರ ಆದ್ಯಕರ್ತವ್ಯವೇ ಆಗಿದೆ. ಅದುದರಿಂದ  ಶ್ರೀ ಮುರ್ಡೇಶ್ವರ ದೇವಸ್ಥಾನದಲ್ಲಿ ಭಕ್ತರು ಸಾತ್ವಿಕ ಉಡುಪುಗಳನ್ನು ಧರಿಸಿ ಬರಬೇಕೆಂಬ ನಿಯಮವನ್ನು ಹಾಕಿ ಅದರ ಪಾವಿತ್ರ್ಯವನ್ನು ಕಾಪಾಡಬೇಕಾಗಿ ಈ ಮೂಲಕ ಎಲ್ಲಾ ಶ್ರದ್ಧಾಳು ಮತ್ತು ಮಹಿಳೆಯರಿಗೆ ವಿನಂತಿಸಿಕೊಳ್ಳುತ್ತಿದ್ದೇವೆ. ಇಂತಹ ಧರ್ಮಜಾಗೃತಿಯ ಪ್ರಯತ್ನದಿಂದ ಮುರ್ಡೇಶ್ವರ ದೇವರ ಕೃಪೆಯು ನಿಶ್ಚಿತವಾಗಿಯೂ ನಮ್ಮೆಲ್ಲರ ಮೇಲಾಗುವುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಧರ್ಭದಲ್ಲಿ ಮಾಜಿ ಸೈನಿಕರಾದ ಶ್ರೀಕಾಂತ ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ  ಶ್ರೀನಿವಾಸ ನಾಯ್ಕ,  ದಿನೇಶ ನಾಯ್ಕ, ಶ್ರೀ ಪಾಂಡುರಂಗ ನಾಯ್ಕ,  ಸಂತೋಷ ಆಚಾರ್ಯ, ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಜಯಂತ ನಾಯ್ಕ,  ರಾಜು ನಾಯ್ಕ,  ಮೋಹನ್ ನಾಯ್ಕ, ಹಿಂದೂ ಜನಜಾಗೃತಿ ಸಮಿತಿಯ, ಜಿಲ್ಲಾ ಸಮನ್ವಯಕರಾದ  ಶರತ್ ಕುಮಾರ್ ನಾಯ್ಕ , ಸಂತೋಷ ಭಟ್ಕಳ ಮುಂತಾದವರು ಉಪಸ್ಥಿತರಿದ್ದರು.