ದೇವನಹಳ್ಳಿ ಹೊರವಲಯದ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್​ನಲ್ಲಿ ಜಿ-20 ಶೃಂಗಸಭೆ: 40 ದೇಶಗಳ ಪ್ರಮುಖ ಗಣ್ಯರು‌ ಭಾಗಿ.!

ಬೆಂಗಳೂರು: ದೇವನಹಳ್ಳಿ ಹೊರವಲಯದ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್​ನಲ್ಲಿ ಜಿ-20 ಶೃಂಗಸಭೆಯು ಇಂದಿನಿಂದ 5 ದಿನಗಳ ಕಾಲ ನಡೆಯಲಿದೆ. ಇದರಲ್ಲಿ 40 ದೇಶಗಳ ಪ್ರಮುಖ ಗಣ್ಯರು‌ ಭಾಗಿಯಾಗುತ್ತಿದ್ದಾರೆ.

ಈ ಹಿನ್ನಲೆ ಹೋಟೆಲ್​ನ ಬಳಿ ನಂದಿ ಮಂಟಪ ಮಾದರಿಯಲ್ಲಿ ದ್ವಾರ ಬಾಗಿಲುಗಳ ನಿರ್ಮಾಣ ಮಾಡಲಾಗಿದ್ದು, ಗಣ್ಯರ ಭದ್ರತೆಗೆ ಮೂರು ಹಂತಗಳಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಭೆ ನಡೆಯುವ ಹೋಟೆಲ್ ಸುತ್ತಮುತ್ತ 2 ಕಿ.ಮೀ ​ವರೆಗೆ ಸೂಕ್ಷ್ಮ ನಿಗಾ ಸ್ಥಳದಲ್ಲಿ ‌ಎಸ್​​ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಒಟ್ಟು ಎರಡು‌‌ ಹಂತದಲ್ಲಿ ನಡೆಯಲಿರುವ ಐದು ದಿನಗಳ‌ ಸಭೆ ಇದಾಗಿದ್ದು, ಮೊದಲಿಗೆ 40 ದೇಶಗಳ ಪ್ರಮುಖ ಅಧಿಕಾರಿಗಳಿಂದ 3 ದಿನ ಸಭೆ ನಡೆಯಲಿದೆ. ಬಳಿಕ ವಿದೇಶಿ ವಿತ್ತ ಸಚಿವರಿಂದ 2 ದಿನ ಸಭೆಯ ನಡೆಯಲಿದೆ.

ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಸ್ವೀಕರಿಸಿದ ಬಳಿಕ ಬರುವ ವಿದೇಶಿ ರಾಯಭಾರಿಗಳಿಗೆ ತೊಂದರೆಯಾಗಬಾರದು ಎಂದು ತುಂತುರು ಮಳೆಯಲ್ಲಿಯೇ ನಗರದ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿತ್ತು. ಜೊತೆಗೆ ಪ್ರವಾಸೋಧ್ಯಮಕ್ಕೆ ಒತ್ತು ನೀಡಿ ರಾಜ್ಯದ ಅನೇಕ ಐತಿಹಾಸಿಕ ದೇವಸ್ಥಾನಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.