ಡೀಸೆಲ್ ಕದಿಯುತ್ತಿದ್ದ ಅಂತರಾಜ್ಯ ಕಳ್ಳರ ಬಂಧನ.!

ಯಲ್ಲಾಪುರ: ಪಟ್ಟಣದ ಹಳಿಯಾಳ ಕ್ರಾಸ್ ಬಳಿ ಲಾರಿಯ ಡೀಸೆಲ್ ಕಳ್ಳತನ ಮಾಡಿದ ಅಂತರಾಜ್ಯ ಕಳ್ಳರನ್ನ ಪೊಲೀಸರು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಾಲಕ ಲಾರಿ ನಿಲ್ಲಿಸಿ ಮಲಗಿದ್ದ ವೇಳೆ ಡೀಸೆಲ್ ಟ್ಯಾಂಕ್ ಮುಚ್ಚಳ ತೆಗೆದು 30,900 ರೂ ಮೌಲ್ಯದ 360 ಲೀಟರ್ ಡೀಸೆಲ್‌ನ್ನ ಚಾಲಾಕಿ ಕಳ್ಳರು ಕಳವು ಮಾಡಿದ್ದರು.

ಆರೋಪಿತರಾದ ಮಹಾರಾಷ್ಟ್ರ ಮೂಲದ ರಾಜೇಂದ್ರ ಬಾಪು ಪವಾರ, ಆಕಾಶ ರಾಜೇಂದ್ರ ಪವಾರ, ಉಸ್ಮಾನಾಬಾದ್ ಮೂಲದ ದತ್ತಾ ಭಾಗ್ವತ ಕಾವಡೆ, ಕಾಳಿದಾಸ ಲಕ್ಷ್ಮಣ ಕಾಳೆ ಇವರನ್ನು ಪೊಲೀಸರು ಪಟ್ಟಣದ ಟಿ.ಎಂ.ಎಸ್ ಪೆಟ್ರೋಲ್ ಬಂಕ್ ಬಂಧಿಸಿದ್ದಾರೆ. ದೂರುದಾರ ಹನುಮಂತ ಹೊಂಡಾ ಹಾವೇರಿ ಅವರ ದೂರಿನನ್ವಯ ಕಾರ್ಯಾಚರಣೆ ನಡೆಸಿ ಕೃತ್ಯಕ್ಕೆ ಬಳಸಿದ ಲಾರಿಯನ್ನ ಸ್ವತ್ತು ಸಹಿತವಾಗಿ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇನ್ನೊರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಎಸ್ಪಿ ಸುಮನ್ ಪೆನ್ನೆಕರ್, ಹೆಚ್ಚುವರಿ ಎಸ್ಪಿ ಎಸ್.ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರು, ಪಿಎಸೈ ಮಂಜುನಾಥ ಗೌಡರ, ಸಿಬ್ಬಂದಿಗಳಾದ ಬಸವರಾಜ, ಮಹಮ್ಮದ್ ಶಫಿ, ಗಜಾನನ, ಮಹಾಂತೇಶ, ಮುತ್ತಣ್ಣ, ನದೀಶ, ಚಿದಾನಂದ, ಯಲ್ಲಪ್ಪ, ಶೋಭಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *