ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದ ಸಸ್ಯಹಾರಿ ಮೊಸಳೆ ‘ಬಬಿಯಾ’ ಇನ್ನಿಲ್ಲ

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತ ಪದ್ಮನಾಭ ದೇವಸ್ಥಾನದ ಸಸ್ಯಹಾರಿ ಮೊಸಳೆ ಎಂದೇ ಪ್ರಖ್ಯಾತಿ ಪಡೆದ ಬಬಿಯಾ ಹೆಸರಿನ ಮೊಸಳೆ ಸಾವನ್ನಪ್ಪಿದೆ.

ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಎನ್ನಲಾದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಕಳೆದ 70 ವರ್ಷಗಳಿಂದ ದೇವಸ್ಥಾನದ ಕಲ್ಯಾಣಿಯಲ್ಲಿದೆ ಈ ಮೊಸಳೆ ವಾಸವಾಗಿತ್ತು. ಈ ಬಬಿಯಾ ಮೊಸಳೆ ನಿತ್ಯ ಎರಡು ಬಾರಿ ಪೂಜೆ ಬಳಿಕ ನೈವೇದ್ಯ ಸ್ವೀಕರಿಸುತ್ತಿತ್ತು. ದೇವರ ಮೊಸಳೆ ಎಂದೇ ಇದು ಪ್ರಖ್ಯಾತಿ ‌ಪಡೆದಿತ್ತು.‌ ಎರಡು ವರ್ಷಗಳ ಹಿಂದೆ ನೀರಿನಿಂದ ಹೊರ ಬಂದು ದೇಗುಲ ಪ್ರವೇಶಿಸಿದ್ದ ಬಬಿಯಾ,‌ ಮೊದಲ ಬಾರಿಗೆ ದೇಗುಲದ ಆವರಣಕ್ಕೆ ಬಂದಿದ್ದು ಭಕ್ತರ ಅಚ್ಚರಿಗೆ ಕಾರಣವಾಗಿತ್ತು. ದೇವಸ್ಥಾನದ ಆವರಣದಲ್ಲಿ ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನ ನಡೆಯಲಿದೆ.