ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್.! ಅಡಿಕೆ ಆಮದಿನ ಬಗ್ಗೆ ಭಯ ಬೇಡ.!

ಬೆಂಗಳೂರು: ಕೇಂದ್ರ ಸರ್ಕಾರ ಭೂತಾನ್ ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದರಿಂದ, ದೇಶೀಯ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪ್ರಸ್ತುತ ನಮ್ಮ ದೇಶದಿಂದ ಭೂತಾನ್ ಗೆ, ಸಂಸ್ಕರಿತ ಅಡಿಕೆ ಉತ್ಪನ್ನಗಳು ಆಮದು ಪ್ರಮಾಣಕ್ಕಿಂತ ಹೆಚ್ಚು ರಫ್ತು ಆಗುತ್ತಿದೆ ಭೂತಾನ್ ನಿಂದ ಕೇವಲ ಹಸಿ ಅಡಕೆಗೆ ಮಾತ್ರ ಅನುಮತಿ ನೀಡಲಾಗಿದೆ. ನೆರೆಯ ಭೂತಾನ್ ದೇಶವು ಭಾರತದ ಪರಂಪರಾಗತ ಮಿತ್ರ ದೇಶವಾಗಿದ್ದು, ಉಭಯ ದೇಶಗಳ ನಡುವೆ ಉತ್ತಮ ವಾಣಿಜ್ಯ ವಹಿವಾಟು ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಅಡಕೆ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರದ ಜೊತೆಗೆ ಸತತ ಸಂಪರ್ಕದಲ್ಲಿದ್ದು, ಭೂತಾನ್ ಅಡಿಕೆ ಆಮದು ವಿಚಾರವಾಗಿಯೂ ಮಾತುಕತೆ ನಡೆಸಲಾಗುವುದು.  ಬೆಳೆಗಾರರಿಗೆ ಯಾವುದೇ ಗೊಂದಲ, ಆತಂಕ ಬೇಡ. ಈ ವಿಚಾರ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿ ಕೊಡಲು ಲೋಕಸಭಾ ಸದಸ್ಯರ ನೇತೃತ್ವದಲ್ಲಿ ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.