ನಕಲಿ ದಾಖಲೆ ಪತ್ರವನ್ನು ಸೃಷ್ಟಿಸುತ್ತಿದ್ದ ಆರೋಪಿಯ ಬಂಧನ

ಭಟ್ಕಳ: ತಾಲೂಕಿನ ಜಾಲಿರೋಡ್ ಅರ್ಶದ್ ಕ್ಯಾಶ್ಯೂ ಇಂಡಸ್ಟ್ರೀಯಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಯೋರ್ವನಿಗೆ ಪಿಎಫ್ ಹಣವನ್ನು ದೊರಕಿಸಿ ಕೊಡಲು ನಕಲಿ ದಾಖಲೆ ಪತ್ರವನ್ನು ಸೃಷ್ಟಿಸಿದ್ದ ಆರೋಪದ ಮೇರೆಗೆ ಭಟ್ಕಳ ಶಹರ ಠಾಣಾ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಮುಂಡಳ್ಳಿಯ ರಾಜೇಶ ದೇವಡಿಗ (30) ಬಂಧಿತ ಆರೋಪಿ.

ಈತನಿಂದ ವಿವಿಧ ಪ್ರೌಢಶಾಲೆ, ಕಂಪನಿಗಳ ಸೀಲ್‌ಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಆರೋಪಿಯು ಸಾಗರದ ವ್ಯಕ್ತಿಯೋರ್ವರಿಂದ ಸೀಲ್‌ಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಹುಬ್ಬಳ್ಳಿಯ ಪಿಎಫ್ ಕಚೇರಿಗೆ ಸಲ್ಲಿಕೆಯಾಗಿದ್ದ ದಾಖಲೆಗಳಲ್ಲಿನ ಸಹಿ ಹೊಂದಾಣಿಕೆಯಾಗದೇ, ಕಂಪನಿಯ ಮಾಲಕರಿಗೆ ಕಳುಹಿಸಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅರ್ಶದ್ ಕ್ಯಾಶ್ಯೂ ಇಂಡಸ್ಟ್ರೀ ಮಾಲಿಕ ರುಕ್ಕುದ್ದೀನ್ ಮಹ್ಮದ್ ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪೂರ, ಚಿಕ್ಕಮಂಗಳೂರು ಮುಂತಾದ ಕಡೆಯ ಸ್ಕೂಲ್ ಮತ್ತು ಇಂಡಸ್ಟ್ರಿಗೆ ಸಂಬಂದ ಪಟ್ಟ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿದ್ದು, ಆರೋಪಿ ರಾಜೇಶನ ಹಣಕಾಸು ವ್ಯವಹಾರದ ಬಗ್ಗೆ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಬಳಿಕ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಪನ್ನೇಕರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು‌ ಎಸ್. ಬದ್ರೀನಾಥ್ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಮುಂದಾಳತ್ವದಲ್ಲಿ ಪ್ರಕರಣದ ಪತ್ತೆಯ ಕುರಿತಂತೆ ಸಿ.ಪಿ.ಐ ದಿವಾಕರ ಪಿ.ಎಮ್, ಪಿ.ಎಸ.ಐ ಸುಮ ಬಿ, ಯಲ್ಲಪ್ಪ ಹೆಚ್ ಮಾದರ, ಹೆಚ್. ಬಿ ಕುಡಗುಂಟಿ ಹಾಗೂ ಸಿಬ್ಬಂದಿಗಳಾದ, ಮದರಸಾಬ ಚಿಕ್ಕೇರಿ,  ದಿನೇಶ ನಾಯಕ, ಸಿದ್ದಪ್ಪ ಕಾಂಬಳೆ, ಲೋಕಪ್ಪ ಕತ್ತಿ ಮುಂತಾದವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.