ಮತಾಂತರ ನಿಷೇಧ ಕಾಯ್ದೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್ ಖರ್ಗೆ

ಬೆಂಗಳೂರು: ನಿನ್ನೆ ವಿಧಾನಪರಿಷತ್ ನಲ್ಲಿ ಅಂಗೀಕಾರಗೊಂಡ ಮತಾಂತರ ನಿಷೇಧ ವಿಧೇಯಕ ವಿಚಾರವಾಗಿ ಶಾಸಕ ಪ್ರಿಯಾಂಕ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಿಯಾಂಕ್, ವಿಧೇಯಕಗಳನ್ನು ಚರ್ಚಿಸದೇ ಅಂಗೀಕರಿಸಲಾಗುತ್ತಿದೆ. ಈ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ ಎಂದು ಹರಿಹಾಯ್ದರು.

ವಿಧೇಯಕಗಳ ಬಗ್ಗೆ ಗಂಭೀರವಾಗಿ ಚರ್ಚೆಯಾಗಬೇಕು. ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಆದರೆ ಉತ್ತರವನ್ನೇ ಕೊಡದೇ ಗೊಂದಲ ಮೂಡಿಸುತ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಇದು ಗೊಂದಲಗಳಿಂದ ಕೂಡಿದ್ದು ಧಾರ್ಮಿಕ ಹಕ್ಕು ಕಸಿಯುವ ವಿಧೇಯಕ ಎಂದು ಸ್ರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪರಿಚ್ಛೇದ 25, 28ರ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಧಾರ್ಮಿಕ ಹಕ್ಕುಗಳ ಉಲ್ಲಂಘನೆ ಇದರಲ್ಲಿದೆ. ಪ್ರತಿಯೊಬ್ಬರಿಗೂ ಧರ್ಮದ ಬಗ್ಗೆ ಸ್ವಾತಂತ್ರ್ಯವಿದೆ. ವಿಧೇಯಕದ ಬಗ್ಗೆ ಇರುವ ಗೊಂದಲಗಳಿಗೆ ಸರ್ಕಾರ ಉತ್ತರಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕ್ ಕಿಡಿಕಾರಿದರು.