ಕಾಲ್ನಡಿಗೆಯಲ್ಲೇ ಅಜ್ಮೀರ್ ಗೆ ಹೋಗಿ ಮರಳಿದ ಹಳದಿಪುರದ ಸಂಶೀರ್ ಖಾನ್.!

ಹೊನ್ನಾವರ: ತಾಲೂಕಿನ ಹಳದಿಪುರದ ಗ್ರಾ.ಪಂ ಸದಸ್ಯರಾದ ಸಂಶೀರ್ ಖಾನ್ ಸರಿಸುಮಾರು 59 ದಿನಗಳ ಕಾಲ ಕಾಲ್ನಡಿಗೆಯಲ್ಲಿಯೇ ಪ್ರಯಾಣ ನಡೆಸಿ ಅಜ್ಮೀರ ತಲುಪಿ ಪುನಃ ಊರಿಗೆ ಮರಳಿದ್ದಾರೆ.

ಕೇರಳದಿಂದ ಮೆಕ್ಕಾ ತೆರಳಲು ಬಂದಿದ್ದ ಸಿಯಾಬ್ ಎನ್ನುವವರಿಗೆ ಹಳದಿಪುರದಲ್ಲಿ ವಾಸ್ತವ್ಯಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನು ಸಂಶೀರ್ ಮಾಡಿದ್ದರು. ನಂತರ ಸಿಯಾಬ್ ಜೊತೆಗೇ ಅಂಕೋಲಾವರೆಗೆ ತೆರಳಿದ್ದ ಸಂಶೀರ್ ಅಲ್ಲಿಂದ ಮುಂದೆ ಸ್ವಪ್ರೇರಣೆಯಿಂದ ಅಜ್ಮೀರ್ ವರೆಗೆ ಹೋಗಿ ಬರುವುದಾಗಿ ತಮ್ಮ ಕುಟುಂಬಕ್ಕೆ ಹಾಗೂ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿ ಅಲ್ಲಿಂದ ತೆರಳಿದ್ದರು ಎನ್ನಲಾಗಿದೆ.

ಪ್ರತಿದಿನ ಸುಮಾರು 40 ಕಿ.ಮೀ ಗೂ ಹೆಚ್ಚು ಕಾಲ್ನಡಿಗೆಯಲ್ಲಿಯೇ ಸಾಗಿದ್ದು ವಿಶೇಷವಾಗಿದೆ. ಇವರು ಆಗಸ್ಟ್ 14 ರಂದು ಮಧ್ಯರಾತ್ರಿ ಅಜ್ಮೀರ್ ತಲುಪಿದ್ದು, ಆಝಾದಿಕಾ ಅಮೃತ್ ಮಹೋತ್ಸವವನ್ನು ಆಗಸ್ಟ್ 15 ಕ್ಕೆ ಅಲ್ಲಿಯೇ ಆಚರಿಸಿದ್ದಾರೆ. ಅಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಇದೀಗ ತನ್ನ ಸ್ವಂತ ಊರಿಗೆ ವಾಪಸ್ ಆಗಿದ್ದು ಜನರು ಇವರನ್ನು ಅಭಿನಂದಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕ ಹಾಗೂ ಇತರ ಪ್ರಮುಖರು ಅಜ್ಮೀರ್ ಗೆ ತೆರಳಿ, ಸಂಶೀರ್ ಖಾನ್ ರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿದೆ.