ನ. 4 ರಿಂದ ಡಿ. 4 ರವರೆಗೆ ರಾಜ್ಯಾದ್ಯಂತ 14 ನೇ ವರ್ಷದ ಭಗವದ್ಗೀತಾ ಅಭಿಯಾನ


ಶಿರಸಿ: 14 ನೇ ವರ್ಷದ ಭಗವದ್ಗೀತಾ ಅಭಿಯಾನಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನ.4 ರಿಂದ ಆರಂಭಿಸಲಾಗುತ್ತಿದ್ದು, ಡಿ. 4 ರಂದು ದಾವಣಗೆರೆಯಲ್ಲಿ ‌ಮಹಾ ಸಮರ್ಪಣೆ ನಡೆಯಲಿದೆ ಎಂದು ಭಗವದ್ಗೀತಾ ಅಭಿಯಾನದ ಮುಖ್ಯಸ್ಥರು, ಸ್ವರ್ಣವಲ್ಲೀ ‌ಮಹಾ‌ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ‌ಸ್ವಾಮೀಜಿ ತಿಳಿಸಿದ್ದಾರೆ.

ಸ್ವರ್ಣವಲ್ಲೀಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಗೀತಾ ಅಭಿಯಾನಕ್ಕೆ ಈ ಬಾರಿ ಐದನೇ ಅಧ್ಯಾಯ ಆಯ್ಕೆ ಮಾಡಿಕೊಳ್ಳಲಾಗಿದೆ. 2007 ರಿಂದ ಆರಂಭಗೊಂಡ ಈ ಅಭಿಯಾನ ಸಮಾಜದಲ್ಲಿ ಗೀತೆಯ‌ ಮೂಲಕ ಸುಖ ಶಾಂತಿ ನೆಲೆಸುವಂತೆ, ಪ್ರತಿ ವ್ಯಕ್ತಿ ಸುಸಂಸ್ಕೃತರಾಗಲು ಪ್ರೇರೆಪಿಸಲು ಇದು ನಿರಂತರವಾಗಿ ನಡೆಯುತ್ತಿದೆ. ಕಳೆದ ಎರಡು ವರ್ಷ ಕೊರೋನಾ ಕಾರಣದಿಂದ ಸಾರ್ವಜನಿಕವಾಗಿ ನಡೆಸಲು ಸಾಧ್ಯ ಆಗಿರಲಿಲ್ಲ. ಈ ವರ್ಷ ಸಾರ್ವಜನಿಕರ, ಸರ್ಕಾರದ, ಸಂಸ್ಥೆಗಳ ಸಹಕಾರದಲ್ಲಿ‌ ಮುನ್ನಡೆಸಲಾಗುತ್ತದೆ ಎಂದರು.

ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ತಪ್ಪದೇ ಗೀತಾಭಿಯಾನ ನಡೆದಿದೆ. ಇದೇ ರೀತಿ ಅನೇಕ ಜೈಲಿನಲ್ಲಿ ಕೈದಿಗಳ ಮೂಲಕ ಅಭಿಯಾನ ನಡೆಸಲಾಗಿದೆ. ಈ ಬಾರಿ ರಾಜ್ಯದ ಎಲ್ಲ ಜೈಲಿನಲ್ಲೂ ನಡೆಸಲು ಯೋಜಿಸಿದ್ದೇವೆ ಎಂದ ಅವರು, ಮೂರು ಹಂತದಲ್ಲಿ ರಾಜ್ಯದಲ್ಲಿ ಗೀತಾ ಅಭಿಯಾನ ನಡೆಯಲಿದೆ ಎಂದರು.

ಅಭಿಯಾನದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಗೀತೆ ಕುರಿತ ವಿವಿಧ ಸ್ಪರ್ಧೆ ರಾಜ್ಯ ಮಟ್ಟದ ತನಕ‌ ನಡೆಯಲಿದೆ. ಸಾರ್ವಜನಿಕವಾಗಿ ಮೂರು ಹಂತದ ಅಭಿಯಾನಕ್ಕೆ ನ. 4-10, 12-18, 20-ನ.26 ರ ತನಕ ನಡೆಸಬೇಕು. ಒಟ್ಟೂ ಎಂಟು ದಿನಗಳ ಅಭ್ಯಾಸ ಇಲ್ಲಾಗಬೇಕು ಎಂದ ಶ್ರೀಗಳು, ನ. 28 ತಾಲೂಕು ಮಟ್ಟದ, ನ. 30 ಜಿಲ್ಲಾ‌ ಮಟ್ಟದ, ಡಿ. 4 ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿದೆ. ನ. 27 ರಿಂದ ಏಳು ದಿನಗಳ ಕಾಲ ಪ್ರತಿ‌ ಮನೆಯಲ್ಲಿ 5 ನೇ ಅಧ್ಯಾಯ ಪಠಿಸಬೇಕು. ಡಿ. 3 ರಂದು ಹದಿನೆಂಟೂ ಅಧ್ಯಾಯ ಪಠಣ ಮಾಡಿ ಗೀತಾ ಜಯಂತಿ ಆಚರಿಸಬೇಕು ಎಂದು ಆಶಿಸಿದರು.

ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ‌.ಎನ್.ಹೆಗಡೆ ಮಾಹಿತಿ ನೀಡಿ ಅಭಿಯಾನ ಕುರಿತು ಮಾಹಿತಿ, ಸಂಪರ್ಕಕ್ಕೆ ವೆಂಕಟ್ರಮಣ ಹೆಗಡೆ 8277383500 ಅಥವಾ 08384 279359 ಗೆ ಮುಂಜಾನೆ 11-1 ಅಥವಾ ಸಂಜೆ 4-6 ರ ತನಕ ಸಂಪರ್ಕ ಮಾಡಬಹುದಾಗಿದೆ ಎಂದರು. ಈ ವೇಳೆ ಮಠದ ವ್ಯವಸ್ಥಾಪಕ ಎಸ್.ಎನ್ ಗಾಂವಕರ್ ಹಾಗೂ ಇತರರು ಇದ್ದರು.

ಮನುಷ್ಯ ಅನೇಕ ವಿಕಾರಗಳಿಗೆ ಬಲಿ ಆಗುತ್ತಿದ್ದಾನೆ. ವಿಕೃತ ‌ಮನಸ್ಸು ಅಡ್ಡದಾರಿ ಹಿಡಿಯುತ್ತಿದೆ. ಅಪಕ್ವ, ವಿಕೃತ ಮನಸ್ಸಿನ ಪರಿಷ್ಕಾರಕ್ಕೆ ಆಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರ. ಆದ್ಯಾತ್ಮ ವಿದ್ಯೆಯ ಆಕರ ಗ್ರಂಥವೇ ಭಗವದ್ಗೀತೆ.

– ಸ್ವರ್ಣವಲ್ಲೀ ಶ್ರೀ