ಸೆ. 17 ರಿಂದ ಅ. 2 ರವರೆಗೆ ಸೇವಾಪಾಕ್ಷಿಕ ಆಚರಣೆ

ಸಿದ್ದಾಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಪಂಡಿತ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನದ ಪ್ರಯುಕ್ತ ಸೆ. 17 ರಿಂದ ಅ. 2 ರವರೆಗೆ ಸೇವಾಪಾಕ್ಷಿಕ ಆಚರಿಸಲಾಗುವುದು ಎಂದು ಬಿಜೆಪಿ ವಿಭಾಗ ಪ್ರಭಾರಿ ಗಿರೀಶ ಪಟೇಲ್ ತಿಳಿಸಿದರು.

ಪಟ್ಟಣದ ಬಾಲಭವನದಲ್ಲಿ ಬುಧವಾರ ನಡೆದ ತಾಲೂಕಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಸೇವಾಪಾಕ್ಷಿಕದ ಅಂಗವಾಗಿ ಯುವ ಮೋರ್ಚಾ ನೇತ್ರತ್ವದಲ್ಲಿ ದೇಶಾದ್ಯಂತ ಬೃಹತ್ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಫಲಾನುಭವಿ ಸಮಾವೇಶ ನಡೆಸಲಾಗುವುದು. ಬಿಜೆಪಿ ಕೇವಲ ರಾಜಕಾರಣ ಮಾಡಲು ಇರುವ ಪಕ್ಷವಲ್ಲ. ರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಿಜೆಪಿ ಕೆಲಸ ಮಾಡಿದೆ. ಕಾಂಗ್ರೆಸ್ ವಿರೋಧ ಪಕ್ಷವಾಗಿ ಆಧಾರ ರಹಿತವಾಗಿ ಆಪಾದನೆ ಮಾಡುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದಲ್ಲ. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲಾ ಕಟಿಬದ್ಧರಾಗೋಣ ಎಂದರು.

ಈ ವೇಳೆ ಮಂಡಲದ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ, ಮಂಡಲದ ಪ್ರಭಾರಿ ಕುಮಾರ ಮಾರ್ಕಾಂಡೆ, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ ಕಡಕೇರಿ, ಪ.ಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಉಪಸ್ಥಿತರಿದ್ದರು.