ವಿದ್ಯುತ್ ಸ್ಪರ್ಶಿಸಿ ಮೇಯಲು ಹೋದ ಆಕಳು ಸಾವು

ಮುಂಡಗೋಡ: ಮೇಯಲು ಹೋಗಿದ್ದ ಆಕಳೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಸೋಮವಾರ ಪಟ್ಟಣದ ನ್ಯಾಸರ್ಗಿ ರಸ್ತೆಯ ಶಿಶುನಾಳ ಶರೀಫ ದೇವಸ್ಥಾನದ ಹತ್ತಿರ ನಡೆದಿದೆ.

ಪಟ್ಟಣದ ನೆಹರು ನಗರದ ಮಲ್ಲಿಕ್ ಸಾಬ್ ಅಲ್ಲಿಸಾಬ್ ನದಾಪ್ ಎಂಬುವರ ಆಕಳು ಸಾವನ್ನಪ್ಪಿದೆ. ಎಂದಿನಂತೆ ಸೋಮವಾರ ಬೆಳಿಗ್ಗೆ ಆಕಳು ಮೇಯಲು ಹೋಗಿತ್ತು. ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಶಿಶುನಾಳ ಶರೀಫ ದೇವಸ್ಥಾನದ ಸನಿಹದಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಅರ್ತಿಂಗ್ ತಂತಿಗೆ ವಿದ್ಯುತ್ ಹರಿದಿದೆ. ಈ ವೇಳೆ ಹತ್ತಿರದಲ್ಲಿ ಮೇಯುತ್ತಿದ್ದ ಆಕಳಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ಸ್ಥಳಕ್ಕೆ ಹೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಮೃತಪಟ್ಟ ಆಕಳು ಸುಮಾರು ಐವತ್ತು ಸಾವಿರ ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿದೆ.