ಕೊನೆಯುಸಿರೆಳೆದ ಕಲಾತ್ಮಕ ಸಹಿ ಹಾಕುವ ಉಪನೋಂದಣಾಧಿಕಾರಿ ಶಾಂತಯ್ಯ

ಬೆಂಗಳೂರು: ಕಲಾತ್ಮಕವಾಗಿ ಸಹಿ ಹಾಕುವ ಮೂಲಕ ಪ್ರಸಿದ್ಧಿ ಪಡೆದಿದ್ದ ನೆಲಮಂಗಲ ತಾಲೂಕಿನ ಕಂಬಾಳು ಗ್ರಾಮದ ನಿವಾಸಿ ನಿವೃತ್ತ ಉಪನೋಂದಣಾಧಿಕಾರಿ ಶಾಂತಯ್ಯ (61) ನಿಧನರಾಗಿದ್ದಾರೆ. ತಮ್ಮ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಅನಾರೋಗ್ಯದಿಂದ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಶಾಂತಯ್ಯ ಕೊನೆಯುಸಿರೆಳೆದಿದ್ದಾರೆ. ಗುರುವಾರ ಸ್ವಗ್ರಾಮದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಯಿತು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.

ಉತ್ತರಕನ್ನಡದ ಹೊನ್ನಾವರದಲ್ಲಿ ಉಪನೋಂದಣಾಧಿಕಾರಿ ಆಗಿದ್ದ ಶಾಂತಯ್ಯ, 1 ವರ್ಷದ ಹಿಂದೆ ನಿವೃತ್ತರಾಗಿದ್ದರು. ಅವರು ಒಂದು ನಿಮಿಷ ತೆಗೆದುಕೊಂಡು ಯಾರೂ ನಕಲು ಮಾಡಲಾಗದಂತಹ ಕಲಾತ್ಮಕ ಸಹಿ ಹಾಕುತ್ತಿದ್ದರು. ಅವರ ಸಹಿಯನ್ನು ಮೆಚ್ಚಿದ ಹೈಕೋರ್ಟ್​ ನ್ಯಾಯಾಧೀಶರೊಬ್ಬರು ಅವರನ್ನು ಗೌರವಿಸಿದ್ದರು.