ಮಾಜಿ ಸಚಿವ ಪ್ರಭಾಕರ್ ರಾಣೆ ಇನ್ನಿಲ್ಲ: ರಾಣೆ ನಿಧನಕ್ಕೆ ಗಣ್ಯರ ಸಂತಾಪ

ಕಾರವಾರ: ಮಾಜಿ ರಾಜ್ಯ ಸಚಿವ ಪ್ರಭಾಕರ್ ರಾಣೆ (80) ಅವರು ತಾಲೂಕಿನ ಸಿದ್ದರದ ತಮ್ಮ ನಿವಾಸದಲ್ಲಿ ಸೋಮವಾರ ಕೊನೆಯುಸಿರೆಳೆದರು. ತಿಂಗಳ ಹಿಂದಷ್ಟೇ ಅನಾರೋಗ್ಯಕ್ಕೊಳಗಾಗಿದ್ದ ಅವರು ನಗರದ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದರು.

ಪ್ರಭಾಕರ ರಾಣೆ ಅವರು ಕಾರವಾರ – ಜೊಯಿಡಾ ಕ್ಷೇತ್ರದಿಂದ ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಒಮ್ಮೆ ಶಾಸಕರಾದವರು ಮತ್ತೆ ಶಾಸಕರಾಗಿರುವ ಉದಾಹರಣೆ ಇರುವ ಸಮಯದಲ್ಲಿ ಮೂರು ಬಾರಿ ಆಯ್ಕೆ ಆಗುವ ಮೂಲಕ ಇತಿಹಾಸ ಬರೆದಿದ್ದರು. ರಾಜ್ಯ ಸಾಕ್ಷರತಾ ಮತ್ತು ಗ್ರಂಥಾಲಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ಕಾರವಾರ, ಜೋಯಿಡಾ, ದಾಂಡೇಲಿ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜು ಆರಂಭಿಸಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು.

ಸದ್ಯ ಜೆ.ಡಿ.ಎಸ್. ನಲ್ಲಿ ಗುರುತಿಸಿ ಕೊಂಡಿದ್ದ ಇವರು ಸರಳ, ಸಜ್ಜನ ರಾಜಕಾರಣಿಯಾಗಿ ಹೆಸರು ಮಾಡಿದ್ದರು.
ಸೌಲಭ್ಯಗಳಿಲ್ಲದ ಸಮಯದಲ್ಲಿ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಧಾರೆ ಎರೆದ ರಾಣೆ ಅವರು ಶಿಕ್ಷಣ ಸಚಿವರಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿ, ಜನಮೆಚ್ಚುಗೆಯ ಆಡಳಿತ ನೀಡಿದ್ದರು. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ಮಿಡಿಯುತ್ತಿದ್ದರು. ಇಂಥವರು ಇಂದು ನಮ್ಮನ್ನು ಅಗಲಿರುವುದು ಜಿಲ್ಲೆಗೆ ತುಂಬಲಾರದ ನಷ್ಟ ಎಂದು ಹಲವಾರು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.