ಪೊಲೀಸರಿಗೆ ಹೆದರಿ ಓಡಿದ ಯುವಕ ಸಾವು

ಕಲಬುರಗಿ: ಇಸ್ಪೀಟ್ ಅಡ್ಡೆಯ ಮೇಲೆ ನಡೆದ ಪೊಲೀಸರ ದಾಳಿಗೆ ಹೆದರಿ ಓಡಿ ಹೋಗುವ ವೇಳೆ ಯುವಕನೋರ್ವ ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಸಂಭವಿಸಿದೆ.

ಲಾಡ್ಲಾಪುರ ಗ್ರಾಮ ನಿವಾಸಿ ಸಿದ್ದಪ್ಪ ಕೊಂಡಾ (20) ಸಾವನ್ನಪ್ಪಿದ ಯುವಕ. ಲಾಡ್ಲಾಪುರ ಗ್ರಾಮದ ಹಾಜಿ ಸರ್ವರ್ ದರ್ಗಾದ ಗುಡ್ಡದ ಹತ್ತಿರ ಇಸ್ಪೀಟ್ ಆಡುತ್ತಿದ್ದ 10 ರಿಂದ 15 ಜನರ ತಂಡದ ಮೇಲೆ ವಾಡಿ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೂಜಾಡುತ್ತಿದ್ದವರು ಮತ್ತು ವೀಕ್ಷಕರು ಪೊಲೀಸರಿಗೆ ಹೆದರಿ ದಿಕ್ಕಾಪಾಲಾಗಿ ಓಡಿದ್ದಾರೆ. ಗುಡ್ಡದ ಸುತ್ತಲೂ ಮುಳ್ಳು ಕಂಟಿ ಪ್ರದೇಶವಾಗಿದ್ದು, ತಗ್ಗು ಗುಂಡಿಗಳಿವೆ. ಹೀಗೆ ಓಡುವಾಗ ಕೆಲವರು ಪೊಲೀಸರ ಅತಿಥಿಯಾಗಿದ್ದಾರೆ. ಸಿದ್ದಪ್ಪ ಮಾತ್ರ ತಪ್ಪಿಸಿಕೊಂಡು ರಾತ್ರಿಯಿಡೀ ಕಣ್ಮರೆಯಾಗಿದ್ದ.

ಎಲ್ಲಿಯಾದರೂ ಅಡಗಿಕೊಂಡಿರಬಹುದು ಮರಳಿ ಮನೆಗೆ ಬರುತ್ತಾನೆ ಎಂದು ಭಾವಿಸಿದ್ದ ಕುಟುಂಬ ಸದಸ್ಯರಿಗೆ ಬೆಳಿಗ್ಗೆ ಶಾಕ್ ಉಂಟಾಗಿದೆ. ಸಿದ್ದಪ್ಪನ ಮೃತದೇಹ ಗುಡ್ಡದ ಸಮೀಪ ಇರುವ ಗುಡಿಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.

ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಹಾಗೂ ಕುಟುಂಬ ಸದಸ್ಯರು, ಲಾಡ್ಲಾಪುರ ಮಾರ್ಗದ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಮೃತನ ಸಾವಿಗೆ ಕಾರಣರಾದ ಪೊಲೀಸರ ಮೇಲೆ ಕ್ರಮಕೈಗೊಳ್ಳಬೇಕು. ಹಾಗೂ ಆತನ ಸಾವಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.