ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್: ಚಿನ್ನ ಹಾಗೂ ಬೆಳ್ಳಿ ಗೆದ್ದ ನಿವೇದಿತಾ ಸಾವಂತ

ಕಾರವಾರ: ಇಲ್ಲಿನ ಕ್ರೀಡಾಪಟು ನಿವೇದಿತಾ ಪ್ರಶಾಂತ ಸಾವಂತ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಒಂದು ಚಿನ್ನ ಒಂದು ಬೆಳ್ಳಿ ಪದಕವನ್ನು ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಆಗಸ್ಟ್ 26-28 ರ ವರೆಗೆ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಅಥ್ಲೆಟಿಕ್ ಚಾಂಪಿಯನ್ ಶಿಪ್ ಆಯೋಜಿಸಿತ್ತು. ಇದರಲ್ಲಿ ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಸ್ಪರ್ಧಿಸಿದ್ದ ಕಾರವಾರದ ಚಿನ್ನದ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಪ್ರಶಾಂತ ಸಾವಂತ ಮಹಿಳೆಯರ ಡಿಸ್ಕಸ್ ಎಸೆತದಲ್ಲಿ 39.92 ಮೀ. ಡಿಸ್ಕಸ್ ಎಸೆಯುವ ಮೂಲಕ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೇ ಮಹಿಳೆಯರ ಹ್ಯಾಮರ್ ಥ್ರೋ ವಿಭಾಗದಲ್ಲಿ 43.59 ಮೀ. ಎಸೆಯುವ ಮೂಲಕ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡು ರಾಷ್ಟ್ರ ಮಟ್ಟದ ಮುಕ್ತ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಕಾರವಾರದ ನಿವೇದಿತಾ ಸಾವಂತ ಈವರೆಗೆ ಡಿಸ್ಕಸ್ ಹಾಗೂ ಗುಂಡು ಎಸೆತದ ವಿವಿದ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ದಿಸಿ 9 ಚಿನ್ನ 7 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಪಡೆದಿದ್ದಾಳೆ. ರಾಜ್ಯಮಟ್ಟದ ಡಿಸ್ಕಸ್ ಎಸೆತದ ದಾಖಲೆ ನಿವೇದಿತಾ ಹೆಸರಿನಲ್ಲಿದೆ. ಕಾರವಾರದ ಅಥ್ಲೆಟಿಕ್ಸ್ ತರಬೇತುದಾರರಾದ ಪ್ರಕಾಶ ರೇವಣಕರ ಬಳಿ ಅಥ್ಲೆಟಿಕ್ಸ್ ನಲ್ಲಿ ತರಬೇತಿ ಪಡೆಯುತ್ತಿರುವ ನಿವೇದಿತಾ ಕ್ರೀಡಾ ಕೋಟಾದಡಿಯಲ್ಲಿ ತುಮಕೂರಿನ ಸಿದ್ದಗಂಗಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಪ್ರಸ್ತುತ ಟಿಸಿಎಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ.

ನಿವೇದಿತಾಳ ಈ ಕ್ರೀಡಾ ಸಾಧನೆಗೆ ಉತ್ತರ ಕನ್ನಡ ಅಥ್ಲೆಟಿಕ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಸದಾನಂದ ನಾಯ್ಕ, ಕಾರ್ಯದರ್ಶಿ ಕೆ. ಆರ್. ನಾಯಕ ಹಾಗೂ ಜಿಲ್ಲೆಯ ಕ್ರೀಡಾ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.