ವಲಯಮಟ್ಟ ಕ್ರೀಡಾಕೂಟದಲ್ಲಿ ಶಿರವಾಡ ಶಾಲೆ ವೀರಾಗ್ರಣಿ

ಕಾರವಾರ: ಇತ್ತೀಚೆಗೆ ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ಹಾಗೂ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮವು ತಾಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ನಡೆಯಿತು.

ಆ. 23 ರಂದು ತಾಲೂಕಿನ ಕಡವಾಡದಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕೆಲವು ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದರು. ಇನ್ನು ಆ. 25 ರಂದು ತಾಲೂಕಿನ ಕೆರವಡಿಯಲ್ಲಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಇದೇ ಶಾಲೆಯು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಈ ಎಲ್ಲ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಪತ್ರಕರ್ತ ರವಿ ಗೌಡ ಅವರು ಪಾಲ್ಗೊಂಡು ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಅವರು ಮಕ್ಕಳನ್ನು ಅಭಿನಂದಿಸಿ ಮಾತನಾಡಿ ಶಾಲೆಯಲ್ಲಿ ಪಾಠದೊಂದಿಗೆ ಆಟವೂ ಮುಖ್ಯವಾಗಿದೆ. ಶಿರವಾಡದ ಶಾಲಾ ಮಕ್ಕಳು ಹಲವಾರು ವರ್ಷಗಳಿಂದಲೂ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುವುದರೊಂದಿಗೆ ಹೆಚ್ಚು ಬಾರಿ ಸಮಗ್ರ ವೀರಾಗ್ರಣಿಯನ್ನು ಪಡೆದುಕೊಂಡಿದ್ದಾರೆ. ಮುಂದೆ ತಾಲೂಕಾ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿಯೂ ಪ್ರಶಸ್ತಿಯನ್ನು ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿಗಳು, ಶಾಲಾ ಮಕ್ಕಳು ಇದ್ದರು.