ಪ್ರಿಯಾಂಕ್ ಖರ್ಗೆ ಹೇಳಿಕೆ ಮಹಿಳಾ ಕುಲಕ್ಕೇ ಮಾಡಿದ ಅವಮಾನ – ಶೋಭಾ ನಾಯ್ಕ

ಶಿರಸಿ: ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಇಡೀ ಮಹಿಳಾ ಕುಲಕ್ಕೆ ಅವಮಾನದ ಸಂಗತಿ. ಇದನ್ನು ಪಕ್ಷಾತೀತವಾಗಿ ಖಂಡಿಸಬೇಕು ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ನಾಯ್ಕ ಹೇಳಿದರು. ನಗರದ ದೀನ್‌ದಯಾಳ ಉಪಾಧ್ಯಾಯ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಪ್ರಿಯಾಂಕ ಖರ್ಗೆ ಸಚಿವರಾದವರು. ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಉನ್ನತ ಸ್ಥಾನವನ್ನು ಅಲಕಂರಿಸಿದವರು. ಹೀಗಿದ್ದಾಗೂ ಪ್ರಿಯಾಂಕ ಇಂಥ ಹೇಳಿಕೆ ನೀಡಿದ್ದು ಅವರಿಗೆ ಶೋಭೆ ತರುವುದಿಲ್ಲ. ಇದರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ವಿಷಯವಾಗಿ ಪ್ರತಿರೋಧ ವ್ಯಕ್ತಪಡಿಸುತ್ತೇವೆ ಎಂದರು.

ಇವರು ಶಾಸಕರಾಗಿ ಆಯ್ಕೆಯಾಗಬೇಕಾದರೆ ಮನೆಮನೆಗೆ ತೆರಳಿ ಮಹಿಳೆಯರಿಗೆ ಕೈ ಮುಗಿದು ಮತ ಪಡೆದಿದ್ದಾರೆ. ಅದೇ ಮಹಿಳೆಯರ ಬಗ್ಗೆ ಅವಮಾನ ಮಾಡುವ ಹೇಳಿಕೆ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಮಹಿಳಾ ಮೋರ್ಚಾ ಸದಸ್ಯೆ ಉಷಾ ನಾಯ್ಕ, ನಿರ್ಮಾಲಾ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಶರ್ಮಿಳಾ, ತಾಲೂಕು ಅಧ್ಯಕ್ಷೆ ದೀಪಾ ಮಹಾಲಿಂಗಣ್ಣನವರ್ ಇದ್ದರು