ಶಿವಕುಮಾರ ಸ್ವಾಮೀಜಿ ಜನ್ಮಜಯಂತಿ: ಸಿದ್ಧಗಂಗಾ ಮಠದ ಸೇವೆಯನ್ನು ಕೊಂಡಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವದ ಅಂಗವಾಗಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಠದ ತ್ರಿವಿಧ ದಾಸೋಹ, ಶಿಕ್ಷಣ ಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ನೀಡಿರುವ ಮಹತ್ವದ ಕೊಡುಗೆಯನ್ನು ಅವರು ಹೃತ್ಪೂರ್ವಕವಾಗಿ ಪ್ರಶಂಸಿಸಿದರು. “ದಯವೇ ಧರ್ಮದ ಮೂಲ” ಎಂಬ ಆದರ್ಶದಂತೆ ಶ್ರೀಮಠವು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದು ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಕೇಂದ್ರ ಸಚಿವರು, ರಾಜ್ಯ ಸರ್ಕಾರದ ಮಂತ್ರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಶಿವಕುಮಾರ ಸ್ವಾಮೀಜಿಗಳ ಸೇವಾ ಪರಂಪರೆಯನ್ನು ಸ್ಮರಿಸಿದರು.

ತುಮಕೂರು :

ದೇಶದ ವಿಕಾಸಕ್ಕೆ ಸಿದ್ಧಗಂಗಾ ಮಠದ ಪಾತ್ರ ಬಹುದೊಡ್ಡದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಸಿದ್ಧಗಂಗಾಮಠದ ವಸ್ತು ಪ್ರದರ್ಶನಾಲಯ ಮೈದಾನದಲ್ಲಿ ನಡೆದ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಿದ್ಧಗಂಗಾ ಮಠಕ್ಕೆ ಬಂದಿರುವುದಕ್ಕೆ ನನಗೆ ಖುಷಿಯಾಗಿದೆ. ಬಡ ಮಕ್ಕಳಿಗೆ ಶಿಕ್ಷಣ, ದಾಸೋಹ‌ ಆಶ್ರಯದ ಮೂಲಕ ಮಠ ಸೇವೆ ಸಲ್ಲಿಸಿದ್ದು, ದಯವೇ ಧರ್ಮದ ಮೂಲವಯ್ಯ ಎಂಬಂತೆ ಶ್ರೀಮಠ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ವೀರಶೈವ-ಲಿಂಗಾಯತ ಮಠಗಳು ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದು, ಅದರಲ್ಲಿ ಸಿದ್ಧಗಂಗಾಮಠ ಮುಂಚೂಣಿಯಲ್ಲಿದೆ. ಶಿವಕುಮಾರ ಸ್ವಾಮೀಜಿಗಳು ಇಷ್ಟು ವರ್ಷಗಳು ಒಂದೇ ಸ್ಥಳದಲ್ಲಿ ಒಂದೇ ಕಾರ್ಯ ನಿರಂತರವಾಗಿ ಮಾಡುವ ಮೂಲಕ ಜೀವನ ಸಮರ್ಪಣೆ ಮಾಡಿದ್ದಾರೆ. ಸ್ವಾಮೀಜಿಗಳ ದಾರಿಯನ್ನು ವಿಸ್ಮಯ ಹಾಗೂ ಪವಾಡ ಎನ್ನಬಹುದು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಲಿಂಗಸ್ವಾಮೀಜಿ ಹೇಳಿದ್ದಾರೆ. ಶಿವಕುಮಾರ ಸ್ವಾಮೀಜಿಗಳ ಬದುಕಿನಲ್ಲಿ 2 ಘಟನೆಗಳಿವೆ. ಅವೆಂದರೆ ಬಡಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡೋದು ಎಂದು ಶ್ರೀಗಳು ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್​​, ಸಬ್​​ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ರೀತಿ ಶ್ರೀಗಳು ಸೇವೆ ಮಾಡುತಿದ್ದರು ಎಂದು ಗುಣಗಾನ ಮಾಡಿದ್ದಾರೆ. ಶಿವಕುಮಾರ ಸ್ವಾಮಿಜಿಗಳು ಒಂದು ಶಕ್ತಿಯಾಗಿದ್ದರು. ಅನಾಥ ಮಕ್ಕಳ ಅಪ್ಪನಾಗಿ ಸಲಹಿದ ಕಥೆ ಅವರದ್ದು. ಸ್ವಾಮೀಜಿ ಮನ್ಯಷ್ಯನಿಂದ ಮಹದೇವರಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ತ್ರಿವಿಧ ದಾಸೋಹದ ಮೂಲಕ ಸಿದ್ಧಗಂಗಾ ಮಠ ಪ್ರಸಿದ್ಧಿಯಾಗಿದ್ದು, ಆಧ್ಯಾತ್ಮಿಕ ಕ್ಷೇತ್ರವಾಗಿ ಸಿದ್ಧಗಂಗಾ ಮಠ ಜನಪರ ಕೆಲಸ ಮಾಡಿದೆ. ಸಿದ್ಧಗಂಗಾ ಮಠ ಕೇವಲ ಧರ್ಮ ಕ್ಷೇತ್ರವಲ್ಲ. ಬದಲಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಯ ಕ್ಷೇತ್ರ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಕೂಡ ಶ್ರೀಗಳ ಸಮಾಜ ಸೇವೆಯನ್ನು ಕೊಂಡಾಡಿದ್ದಾರೆ. ಇದೇ ವೇಳೆ ರಾಷ್ಟ್ರಪತಿಗಳಿಗೆ ಮಠದ ಪರವಾಗಿ ಬಸವಣ್ಣನ ಮೂರ್ತಿಯನ್ನ ಸಿದ್ದಲಿಂಗ ಸ್ವಾಮೀಜಿ ಉಡುಗೊರೆಯಾಗಿ ನೀಡಿದ್ದಾರೆ.