
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇತ್ತೀಚಿನ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಟ್ರಾಫಿಕ್ ಹಾಗೂ ಜನಸಂದಣಿ ನಿರ್ವಹಣೆಯು ದೇಶದ ಗಮನ ಸೆಳೆದಿದೆ. ಟಿಕೆಟ್ ಜೊತೆಗೆ ಮೆಟ್ರೋ ಸೌಲಭ್ಯ ಒದಗಿಸಿದ ಬೆಂಗಳೂರು ಪೊಲೀಸರ ಹಾಗೂ ಕೆಎಸ್ಸಿಎ ಕಾರ್ಯಪದ್ಧತಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಈ ‘ಬೆಂಗಳೂರು ಮಾದರಿ’ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಂಬೈ ಮತ್ತು ಕೋಲ್ಕತ್ತಾ ಕ್ರಿಕೆಟ್ ಮಂಡಳಿಗಳು ಕೂಡ ಅದನ್ನೇ ಅನುಸರಿಸಲು ಮುಂದಾಗಿವೆ.

ಬೆಂಗಳೂರು :
ಸಿಲಿಕಾನ್ ಸಿಟಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಈಗ ಕೇವಲ ಕ್ರಿಕೆಟ್ ಪಂದ್ಯಗಳಿಗಷ್ಟೇ ಅಲ್ಲ, ಸುಸಜ್ಜಿತ ಜನಸಂದಣಿ ನಿರ್ವಹಣೆಗೂ ಮಾದರಿಯಾಗಿ ಹೊರಹೊಮ್ಮಿದೆ. ಆರ್ಸಿಬಿ ವಿಜಯೋತ್ಸವ ಕಾಲ್ತುಳಿತ ಘಟನೆಯಿಂದ ಇಡೀ ದೇಶದ ಗಮನ ಸೆಳೆದಿದ್ದ, ಜನಸಂದಣಿ ನಿರ್ವಹಣೆಯಲ್ಲಿ ವಿಫಲವಾಗಿದ್ದ ಬೆಂಗಳೂರು ಅದಾಗಿ ಒಂದು ವರ್ಷದ ಒಳಗೇ ದೇಶದ ಇತರ ರಾಜ್ಯಗಳ ಹುಬ್ಬೇರುವಂತೆ ಮಾಡಿದೆ. ಇತ್ತೀಚೆಗೆ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದ ಅದ್ಭುತ ವ್ಯವಸ್ಥೆಯನ್ನು ಕಂಡು ಮುಂಬೈ ಮತ್ತು ಕೋಲ್ಕತ್ತಾದಂತಹ ಮೆಟ್ರೋ ಪಾಲಿಟನ್ ನಗರಗಳ ಕ್ರಿಕೆಟ್ ಆಡಳಿತ ಮಂಡಳಿಗಳು ಬೆಂಗಳೂರು ಮಾದರಿಯ ಮಾಹಿತಿಯನ್ನು ಕೋರಿವೆ.
ಕಳೆದ ಆರ್ಸಿಬಿ ಐಪಿಎಲ್ ವಿಜಯೋತ್ಸವ ಕಾರ್ಯಕ್ರಮದ ವೇಳೆ ನಡೆದ ಕಾಲ್ತುಳಿತ ಮತ್ತು ಗೊಂದಲದ ಪರಿಸ್ಥಿತಿಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿತ್ತು. ಆ ಕಹಿ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ಆಡಳಿತ ಮಂಡಳಿ, ಈ ಬಾರಿ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಮೈದಾನದ ಒಳಗೆ ಮತ್ತು ಹೊರಗೆ ಯಾವುದೇ ನೂಕುನುಗ್ಗಲು ಉಂಟಾಗದಂತೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರಿನ ಈ ಯಶಸ್ಸಿನ ಹಿಂದೆ ಇದ್ದ ಪ್ರಮುಖ ಸೂತ್ರವೆಂದರೆ ‘ಮ್ಯಾಚ್ ಟಿಕೆಟ್ ಜೊತೆಯೇ ಮೆಟ್ರೋ ಟಿಕೆಟ್’ ಸೌಲಭ್ಯ. ಕ್ರಿಕೆಟ್ ಟಿಕೆಟ್ ಖರೀದಿಸಿದವರಿಗೇ ಮೆಟ್ರೋ ಪ್ರಯಾಣದ ಕ್ಯೂಆರ್ ಕೋಡ್ ನೀಡಿದ ವ್ಯವಸ್ಥೆಗೆ ಮುಂಬೈ ಮತ್ತು ಕೋಲ್ಕತ್ತಾ ಕ್ರಿಕೆಟ್ ಮಂಡಳಿಗಳು ಮಾರುಹೋಗಿವೆ.
ಮೆಟ್ರೋ ಯಶಸ್ಸಿನ ಬೆನ್ನಲ್ಲೇ, ಮುಂದಿನ ಪಂದ್ಯಗಳ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಿಂದ ನೇರವಾಗಿ ಮೆಜೆಸ್ಟಿಕ್ಗೆ ವಿಶೇಷ ಬಸ್ ವ್ಯವಸ್ಥೆ ಮಾಡಲು ಬಿಎಂಟಿಸಿ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಮತ್ತೊಂದೆಡೆ, ನಕಲಿ ಟಿಕೆಟ್ ಹಾವಳಿಗೆ ಬ್ರೇಕ್ ಹಾಕಲೂ ಕ್ರಮ ಕೈಗೊಳ್ಳಲಾಗುತ್ತಿದೆ.

