ಮಳೆ ಮಧ್ಯೆಯೂ ಹೊತ್ತಿ ಉರಿದ ಬಿಎಂಟಿಸಿ ಬಸ್

ಬೆಂಗಳೂರು, ಆಗಸ್ಟ್​ 06: ನಗರದಲ್ಲಿ ಕಳೆದ ರಾತ್ರಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಮಳೆಯ ನಡುವೆಯೂ ನಗರದ ಮಾನ್ಯತಾ ಟೆಕ್​​ಪಾರ್ಕ್ ಬಳಿ ಬಿಎಂಟಿಸಿ ಎಲೆಕ್ಟ್ರಿಕ್​ ​​ಬಸ್ ಬೆಂಕಿಗಾಹುತಿಯಾಗಿರುವ ಘಟನೆ ನಾಗವಾರ – ಹೆಬ್ಬಾಳ ಸರ್ವಿಸ್ ರಸ್ತೆಯಲ್ಲಿ ನಡೆದಿದೆ. ರಾತ್ರಿ ಸುರಿದ ಮಳೆಯಿಂದ ಸರ್ವಿಸ್​ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಇದೇ ಮಾರ್ಗದಲ್ಲಿ ಬರುತ್ತಿದ್ದ ಬಸ್​ ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ.

ಎಲೆಕ್ಟ್ರಿಕ್​ ಬಸ್​​​ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿದೆ. ಕೂಡಲೆ ಚಾಲಕ ಬಸ್​ ಅನ್ನು ನಿಲ್ಲಿಸಿದ್ದಾನೆ. ಪ್ರಯಾಣಿಕರು ಬಸ್ಸಿಂದ ಕೆಳಗಿಳಿದ್ದಾರೆ. ಅನಂತರ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ತಲುಪುವ ಮೊದಲೇ ಬಸ್​ ಬೆಂಕಿಗಾಹುತಿಯಾಗಿತ್ತು. ಬಸ್​ನಲ್ಲಿ ಉಂಟಾದ ಶಾರ್ಟ್​​​​ ಸರ್ಕ್ಯೂಟ್​​ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಅಗ್ನಿ ಅವಘಡದಿಂದ ನಾಗವಾರ ಜಂಕ್ಷನ್​​ನಿಂದ ಲುಂಬಿನಿ ಗಾರ್ಡನ್​​ವರೆಗೆ ಸುಮಾರು 3 ಕಿಮೀ. ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿತ್ತು. ಟ್ರಾಫಿಕ್​​ನಲ್ಲಿ ಸಿಲುಕಿದ ಅಗ್ನಿಶಾಮಕ ಸಿಬ್ಬಂದಿ ಅವಘಡ ನಡೆದ ಸ್ಥಳಕ್ಕೆ ತೆರಳಲು ಆಗದೆ ಪರದಾಡಿದರು. ಇದರಿಂದ ಘಟನಾ ಸ್ಥಳಕ್ಕೆ ತೆರಳಲು ತಡವಾಯ್ತು.