ಕಾರವಾರ ಡಿ 19: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂಕೋಲಾ ತಾಲ್ಲೂಕಿನ ಆಂದ್ರೆ ಗ್ರಾಮದ ಜಗದೀಶ್ವರಿ ಅಮ್ಮನವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದರು. ಬೆಳಿಗ್ಗೆ 9 ಗಂಟೆಗೆ ದೇವಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ನಾಲ್ಕು ತಾಸು ಬಿಟ್ಟು ದೇವಾಲಯಕ್ಕೆ ಶಿವಕುಮಾರ್ ಬಂದರು.

ಅವರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್ ಇದ್ದರು. ಆದರೆ, ಅವರೆಲ್ಲರನ್ನೂ ಹೊರಗೆ ಬಿಟ್ಟು ಡಿ.ಕೆ.ಶಿವಕುಮಾರ್ ಮಾತ್ರವೇ ಗರ್ಭಗುಡಿ ಪ್ರವೇಶಿಸಿದರು. ಬಾಗಿಲು ಮುಚ್ಚಿ ಪೂಜೆ ಸಲ್ಲಿಸಿದರು. ‘ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆ. ಆಗಾಗ ಅತಿ ಗಣ್ಯರು (ವಿವಿಐಪಿ) ಮಾತ್ರ ಭೇಟಿ ನೀಡುತ್ತಾರೆ. ತಮ್ಮ ಇಷ್ಟಾರ್ಥಗಳ ಬಗ್ಗೆ ದೇವರ ಎದುರು ನಿಂತು ಪ್ರಶ್ನೆ ಹಾಕುವುದು ವಾಡಿಕೆ. ಡಿ.ಕೆ.ಶಿವಕುಮಾರ್ ಕೂಡ ಇಷ್ಟಾರ್ಥ ಸಿದ್ದಿಗೆ ಪ್ರಶ್ನೆ ಹಾಕಲು ಬಂದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.


