ಉತ್ತರ ಕನ್ನಡದ ಈ ಒಂಭತ್ತು ಅದ್ಭುತಗಳಿಗೆ ವೋಟ್ ಮಾಡಿ.! ಭರದಿಂದ ಸಾಗಿದೆ ಕರ್ನಾಟಕದ ಏಳು ಅದ್ಭುತ ಅಭಿಯಾನ.! ಇದರಲ್ಲಿ ನೀವು ಪಾಲ್ಗೊಳ್ಳಿ


ಉತ್ತರ ಕನ್ನಡ: ವಿಶ್ವದ ಏಳು ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ. ಈ ವಿಶೇಷ ಅಭಿಯಾನದಲ್ಲಿ ನೀವು ಪಾಲ್ಗೊಂಡು ಉತ್ತರ ಕನ್ನಡ ಜಿಲ್ಲೆಯ ಅದ್ಭುತಗಳನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ. ಉತ್ತರ ಕನ್ನಡ ಜಿಲ್ಲೆಯ ಎಂಟು ಸ್ಥಳಗಳು ಈಗಾಗಲೇ ಕರ್ನಾಟಕದ ನೂರು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಈ ಎಂಟು ಸ್ಥಳಗಳಿಗೆ ವೋಟ್ ಮಾಡುವ ಮೂಲಕ ನೀವು ಇವುಗಳನ್ನು ರಾಜ್ಯದ ಅದ್ಭುತವನ್ನಾಗಿ ಮಾಡಬಹುದು.

ಉತ್ತರ ಕನ್ನಡ ಜಿಲ್ಲೆಯ ನಾಮ ನಿರ್ದೇಶನಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕದ ಅತಿ ಸುಂದರ ಸಾಗರದಾಳದ ದೃಶ್ಯಲೋಕ ಮತ್ತು ದೇಶದ ಎರಡನೇ ಅತ್ಯುತ್ತಮ ಸ್ಕೂಬಾ ಡೈವಿಂಗ್ ತಾಣ, ಮುರ್ಡೇಶ್ವರ ಸಮೀಪದ ಹೃದಯ ಆಕಾರದ ದ್ವೀಪ ನೇತ್ರಾಣಿ ಇದೆ. ದೇಸಿ ಗೋವುಗಳ ಸ್ವಚ್ಛಂದ ವಿಹಾರ ತಾಣ, ಪ್ರವಾಸಿ ಸ್ಥಳ ಸಿದ್ಧಾಪುರ ತಾಲೂಕಿನ ಬಾನುಳಿ ಮಠದ ಬಳಿಯ ಗೋಸ್ವರ್ಗ 123 ಅಡಿ ಎತ್ತರದ ವಿಶ್ವದ ಎರಡನೇ ಬೃಹತ್ ಮುರ್ಡೇಶ್ವರದ ಶಿವನ ಪ್ರತಿಮೆ, ಭೈರವೇಶ್ವರ ಮತ್ತು ಮೋಹಿನಿ ಎಂಬ ಎರಡು ಬೃಹತ್ ಶಿಖರಗಳು, 64ರಷ್ಟು ಚಿಕ್ಕವುಟ್ಟ ಶಿಖರಗಳು, ವಿಶಿಷ್ಟ ಶಿಲಾ ಶಿಖರ ಹಾಗೂ ಬೃಹತ್ ಕಲ್ಲಿನ ರಚನೆಯಿಂದ ಗಮನಸೆಳವ ಯಾಣ, ಶಿರಸಿ ಸಮೀಪ ವರ್ಷವಿಡೀ ಪ್ರವಹಿಸುವ ಶಾಲ್ಮಲಾ ನದಿಯಲ್ಲಿ ಬಸವ, ಈಶ್ವರನ ಮೂರ್ತಿಗಳು, ಸಾವಿರಕ್ಕೂ ಅಧಿಕ ಶಿವಲಿಂಗಗಳಿದ್ದು, ಇದು ಸಹಸ್ರಲಿಂಗ ಎಂದೇ ಪ್ರಸಿದ್ಧಿಯಾಗಿದೆ. ಓಂ ಚಿಹ್ನೆಯನ್ನು ಹೋಲುವ, ದೇಶ ವಿದೇಶದ ಪ್ರವಾಸಿಗರ ನಚ್ಚಿನ ತಾಣ ಗೋಕರ್ಣದ ಓಂ ಬೀಚ್, ಏಷ್ಯಾದಲ್ಲೇ ಅತೀ ದೊಡ್ಡ ಸೀಬರ್ಡ್ ನೌಕಾನೆಲೆ, ರಾಜ್ಯದ ಪ್ರಥಮ ಹಾಗೂ ಏಕ ಅಣುವಿದ್ಯುತ್ ಸ್ಥಾವರ ಕೈಗಾ ಅಣು ವಿದ್ಯುತ್ ಸ್ಥಾವರ, ಕಾರವಾರ – ಸಮೀಪದ ಕಪ್ಪು ಮರಳ ತೀರದ ತಿಳಿಮಾತಿ ಬೀಚ್ ಇದೆ.

ಈಗಾಗಲೇ https://www.7wondersofkarnataka.com ನಲ್ಲಿ ನಾಮ ನಿರ್ದೇಶನಗೊಂಡಿರುವ ನೂರು ಅದ್ಭುತಗಳ ಸಾಲಿನಲ್ಲಿ ನಿಂತಿರುವ ಉತ್ತರ ಕನ್ನಡ ಜಿಲ್ಲೆಯ ಈ ಎಂಟು ಸ್ಥಳಗಳ ಪೈಕಿ ನಿಮ್ಮ ಆಯ್ಕೆಯ ಸ್ಥಳಕ್ಕೆ ತಲಾ 10 ವೋಟ್ ಮಾಡಿ ಇವನ್ನು ರಾಜ್ಯದ ಏಳು ಅದ್ಭುತಗಳನ್ನಾಗಿಸಬಹುದು.

ಪ್ರಸ್ತುತ 100 ಅದ್ಭುತಗಳ ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಅತಿ ಹೆಚ್ಚು ವೋಟ್ ಪಡೆದ ಸ್ಥಳಗಳು ಮುಂದಿನ ಹಂತದಲ್ಲಿ ಅಂತಿಮ 49ರ ಪಟ್ಟಿಗೆ ಬರಲಿವೆ, ತದನಂತರ ಅಂತಿಮ 21ರ ಪಟ್ಟಿಯಲ್ಲಿ ಉಳಿದು ಬಳಿಕ ಪ್ರವಾಸೋದ್ಯಮ ಇಲಾಖೆ ತಜ್ಞರ ಸಮಿತಿಯ ಆಯ್ಕೆಯಂತೆ ಕರ್ನಾಟಕದ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಬಹುದು, ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಪಾಲಿನ ಹತ್ತು ಪೋಟ್‌ಗಳನ್ನು ತಮ್ಮ ನೆಚ್ಚಿನ ಸ್ಥಳಕ್ಕೆ ನೀಡಬಹುದು. ಜತೆಗೆ ಸ್ನೇಹಿತರು, ಕುಟುಂಬ ಸದಸ್ಯರೂ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬಹುದು.

ಏನಿದು ಅಭಿಯಾನ.?

ಪ್ರಪಂಚದ ಏಳು ಅದ್ಭುತಗಳನ್ನು ಎಂದೋ ಹುಡುಕಿಯಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ‘ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯು ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಈ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ.

‘ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು’ ಎಂದೇ ಪ್ರಸಿದ್ಧಿ, ಇಂತಹ ಕರ್ನಾಟಕದ ಸುಂದರ ಕರಾವಳಿತೀರ, ದುರ್ಗಮ ಕಾನನಗಳು, ರಮಣೀಯ ಜಲಪಾತಗಳು, ಸಮುದ್ರ ತೀರಗಳು, ಐತಿಹಾಸಿಕ ಸ್ಥಳಗಳನ್ನು ಇಂತಹ ಹಲವು ಜಗತ್ತುಗಳನ್ನು ಒಳಗೊಂಡಿದೆ. ಈ ಪೈತಿ ಏಳು ಅದ್ಭುತಗಳನ್ನು ಸಾರ್ವಜನಿಕರೇ ಗುರುತಿಸಲು ರೂಪಿಸಿರುವ ವೇದಿಕೆಯೇ ಬನ್ನಿ ಹುಡುಕೋಣ ಕರ್ನಾಟಕದ ಏಳು ಅದ್ಭುತಗಳನ್ನು’ ಎಂಬ ಈ ಅಭಿಯಾನ.

ಯಾವ ಹಂತದಲ್ಲಿದೆ ಅಭಿಯಾನ.?

ಮೇ ತಿಂಗಳಲ್ಲಿ ಚಾಲನೆ ದೊರೆತಿರುವ ಆರು ಹಂತದ ಈ ಅಭಿಯಾನ ಎರಡನೇ ಹಂತಕ್ಕೆ ತಲುಪಿದೆ, ಮೊದಲ ಹಂತದಲ್ಲಿ ಸಾರ್ವಜನಿಕರು ವೆಬ್‌ಸೈಟ್ ಮೂಲಕ ತಮ್ಮ ನೆಚ್ಚಿನ ಊರು, ಜಿಲ್ಲೆ, ತಾಲೂಕು ಸೇರಿ ರಾಜ್ಯದ ಯಾವುದೇ ಜಾಗದಲ್ಲಿ ತಾವು ನೋಡಿದ ಅದ್ಭುತ ಪ್ರವಾಸೀ ಸ್ಥಳ, ಪಾರಂಪರಿಕ ತಾಣ, ಅತ್ಯಾಧುನಿಕ ಕಟ್ಟಡ, ರಸ್ತೆ ಹೀಗೆ ಅದ್ಭುತ ಎನಿಸುವ ಸ್ಥಳದ ಫೋಟೊ ಅಪ್‌ಲೋಡ್ ಮಾಡಿ ಆ ಸ್ಥಳದ ವೈಶಿಷ್ಟ್ಯವನ್ನು ದಾಖಲು ಮಾಡಿ ನಾಮನಿರ್ದೇಶನ ಮಾಡಿದ್ದಾರೆ. ಇದೀಗ, ಎರಡನೇ ಹಂತದಲ್ಲಿ ಸಾರ್ವಜನಿಕರಿಂದ ನಾಮನಿರ್ದೇಶನಗೊಂಡ ಅದ್ಭುತಗಳಲ್ಲಿ 100 ಸ್ಥಳಗಳನ್ನು ಆಯ್ಕೆಮಾಡಿ, ಅತ್ಯದ್ಭುತ ತಾಣಗಳು ಯಾವುವು ಎಂಬ ಬಗ್ಗೆ ವೋಟಿಂಗ್ ನಡೆಯುತ್ತಿದೆ.

ವೋಟಿಂಗ್ ನಿಯಮ:

  • ಅಯ್ಕೆಯಾಗಿರುವ ನೂರು ಅದ್ಭುತಗಳಿಗೂ ವೋಟ್ ಹಾಕಬಹುದು. ಪ್ರತಿಯೊಂದು ಅದ್ಭುತಕ್ಕೂ ಹತ್ತು ವೋಟ್ ಮಾಡಲು ಅವಕಾಶವಿರುತ್ತದೆ. ಈ ಮೆಗಾ ಅಭಿಯಾನದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ತಿಳಿಸಿ. ತನ್ಮೂಲಕ ನಿಮ್ಮ ಜಿಲ್ಲೆಯ ಸ್ಥಳವನ್ನು ಅದ್ಭುತವನ್ನಾಗಿಸಿ.