ಕಾರವಾರದ ದಂಪತಿಗೆ ಒಲಿದ ‘ರಾಜ್ಯ ರತ್ನ ಪ್ರಶಸ್ತಿ’.!

ಕಾರವಾರ: ಯಶ್ ಇಂಟರ್‌ನ್ಯಾಶನಲ್ ಫ್ಯಾಶನ್ ಅವಾರ್ಡ್ ನಲ್ಲಿ ರಾಜ್ಯ ರತ್ನ ಪ್ರಶಸ್ತಿ ಪಡೆಯುವ ಮೂಲಕ ತಾಲೂಕಿನ ದಂಪತಿಯು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಿವನಾಥ ಸಾವಂತ್ ಹಾಗೂ ನಾಗವೇಣಿ ದಂಪತಿಯೇ ಈ ಪ್ರಶಸ್ತಿಗೆ ಭಾಜನರಾದವರಾಗಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿವನಾಥ ಸಾವಂತ್ ಚಿಕ್ಕಂದಿನಿಂದಲೂ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರು. 2021 ರಲ್ಲಿ ನಡೆದ ಹುಬ್ಬಳ್ಳಿ ಸುಮಧುರ ಫೌಂಡೇಶನ್‌ ನಡೆಸಿದ ಸಂಗೀತ ಸಂಜೆ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಪ್ರಶಸ್ತಿ ಪಡೆದಿದ್ದರು. ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ನಾರ್ಥ್ ಕರ್ನಾಟಕ ಐಡಲ್ ಆಡಿಶನ್‌ನಲ್ಲಿ ಭಾಗವಹಿಸಿ ಸೆಮಿಫೈನಲ್ ತಲುಪಿದ್ದರು. ಹೀಗೆ ರಾಜ್ಯ, ಅಂತರರಾಜ್ಯ ಕಾರ್ಯಕ್ರಮ, ಸ್ಪರ್ಧೆಗಳಲ್ಲಿ ಭಾಗವಹಿಸಿ ಕೀರ್ತಿ ಗಳಿಸಿರುವ ಇವರ ಸಾಧನೆ ಪರಿಗಣಿಸಿ ಸಂಗೀತ ವಿಭಾಗದಲ್ಲಿ ರಾಜ್ಯ ರತ್ನ ಪ್ರಶಸ್ತಿ ನೀಡಲಾಗಿದೆ.

ಇನ್ನು ಇವರ ಪತ್ನಿ ನಾಗವೇಣಿ ಮೂಲತಃ ಯಲ್ಲಾಪುರದ ಚಿಕ್ಕ ಹಳ್ಳಿಯವರಾಗಿದ್ದು, ಚಿಕ್ಕಂದಿನಿಂದ ಓದಿನ ಜೊತೆ ಜೊತೆಗೆ ಕ್ರೀಡೆಯಲ್ಲೂ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲೇ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಸದ್ಯ ಬ್ಯೂಟಿಶಿಯನ್ ಕೋರ್ಸ್ ಪೂರ್ಣಗೊಳಿಸಿರುವ ನಾಗವೇಣಿಗೆ ಕ್ರೀಡೆ ಮತ್ತು ಬ್ಯೂಟಿಶಿಯನ್ ವಿಭಾಗದಲ್ಲಿ ರಾಜ್ಯ ರತ್ನ ಪ್ರಶಸ್ತಿ ನೀಡಲಾಗಿದೆ.

ಬೆಂಗಳೂರಿನ ದಿ ಕ್ಯಾಪಿಟಲ್ ಸ್ಟಾರ್ ಹೋಟೆಲ್‌ನಲ್ಲಿ ಇತ್ತೀಚಿಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮಗೆ ಯಶ್ ಇಂಟರ್‌ನ್ಯಾಶನಲ್ ಫ್ಯಾಶನ್ ಅವಾರ್ಡ್ನಲ್ಲಿ ರಾಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಭಾನುವಾರ ಕಾರವಾರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.