ಬೆಂಗಳೂರು: ರಸ್ತೆ ಡಾಂಬರೀಕರಣಕ್ಕೆ ಸಚಿವರಿಂದಲೇ ಟ್ವೀಟ್ ಮೂಲಕ ಮನವಿ!

ಬೆಂಗಳೂರು, ಆಗಸ್ಟ್ 15: ರಾಜ್ಯದ ಅಭಿವೃದ್ಧಿ ವಿಷಯದಲ್ಲಿ, ರಸ್ತೆ ದುರಸ್ತಿಗೆ ಸಂಬಂಧಿಸಿ ಕಾಂಗ್ರೆಸ್ ಸರ್ಕಾರದ ಸಚಿವರೇ ಅಸಹಾಯಕರಾಗಿದ್ದಾರೆಯೇ? ಇಂಥದ್ದೊಂದು ಪ್ರಶ್ನೆ ಸಚಿವ ಕೃಷ್ಣಭೈರೇಗೌಡ ಮಾಡಿರುವ ಟ್ವೀಟ್​​ನಿಂದ ವ್ಯಕ್ತವಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್​​ಗೆ ನೇರವಾಗಿ ಸಮಸ್ಯೆಗಳ ಬಗ್ಗೆ ಹೇಳಲಾಗದೆ ಸಚಿವರು ಒದ್ದಾಡುತ್ತಿದ್ದಾರೆ ಎಂಬ ಅನುಮಾನ ಇದರಿಂದ ವ್ಯಕ್ತವಾಗಿದೆ.

ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಅಥವಾ ಬಿಎಂಆರ್​​ಸಿಎಲ್ ಎಂಡಿ ಯಾರಾದರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ ಎಂದು ಕೃಷ್ಣಭೈರೇಗೌಡ ಟ್ವೀಟ್​​​ನಲ್ಲಿ ಉಲ್ಲೇಖಿಸಿದ್ದಾರೆ.

ಒಂದಿದೆ ಡಿಕೆ ಶಿವಕುಮಾರ್ ಬ್ರ್ಯಾಂಡ್​​​ ಬೆಂಗಳೂರು ಎಂದು ಭಾಷಣ ಮಾಡುತ್ತಿದ್ದರೆ, ಇತ್ತ ಅವರದ್ದೇ ಸರ್ಕಾರದ ಸಚಿವರು ನೇರವಾಗಿ ಬೆಂಗಳೂರಿನ ರಸ್ತೆ ಸಮಸ್ಯೆ ಬಗ್ಗೆ ಹೇಳಿಕೊಳ್ಳಲಾಗದೆ ಈ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಪ್ರಕಟಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಮಂತ್ರಿಗಳೇ ಇಷ್ಟು ಅಸಹಾಯಕರಾದರೆ ಹೇಗೆ? ಒಂದು ಫೋನ್ ಮಾಡಿದರೆ ಬಿಬಿಎಂಪಿ ಕಮಿಷನರ್ ನಿಮ್ಮ ಫೋನ್ ಸ್ವೀಕರಿಸುತ್ತಿದ್ದಾರೆ ಇಲ್ಲವೋ? ಎಂದು ನರೇಂದ್ರ ಸಿಂಹ ಮೂರ್ತಿ ಎಂಬವರು ಸಚಿವರ ಟ್ವೀಟ್​​ಗೆ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಸರ್ಕಾರ ಆಡಳಿತ ಎಕ್ಸ್​ ತಾಣದ ಮುಖಾಂತರ ನಡೆಸುತ್ತಿರುವುದು ಖುಶಿ. ಆದರೆ ಸಿಲ್ಕ್​ಬೋರ್ಡ್ ಅವಸ್ಥೆ ನಿಮ್ಮ ಗಮನಕ್ಕೆ ಬಾರದಿರುವುದು ವಿಪರ್ಯಾಸ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.