ರಂಗೇರಿಸುವ ‘ಮಾತಿನ ಮಂಟಪ’ ಆ 13 ತಾಳಮದ್ದಲೆ ಕೊನೇ ದಿನ

ಶಿರಸಿ: ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್ ಪ್ರತೀ ವರ್ಷ ಹಮ್ಮಿಕೊಳ್ಳುವ ತಾಳ ಮದ್ದಲೆ‌ ಸಪ್ತಾಹವನ್ನು ಈ ಬಾರಿ ಎಂಟು ದಿನಗಳ‌ ಕಾಲ ನಡೆಸುತ್ತಿದ್ದು, ಆಗಷ್ಟ 13 ಕ್ಕೆ ಕೊನೆಯ ದಿನದ ತಾಳ‌ಮದ್ದಲೆ ನಡೆಯಲಿದೆ.
ಶ್ರೀ ಕೃಷ್ಣನ ಕಥಾ ಹಂದರದ ಕಥೆಗಳನ್ನೇ ಆಯ್ದುಕೊಂಡು ‘ಶ್ರೀಕೃಷ್ಣಾಷ್ಟಕ’ ತಾಳಮದ್ದಲೆಗಳನ್ನು ಆಗಷ್ಟ 6 ರಿಂದ 13 ರ ತನಕ‌ ನಿತ್ಯ ಸಂಜೆ 4 ರಿಂದ ನಡೆಸಲಾಗುತ್ತಿದೆ.

ನಗರದ ಟಿಎಂಎಸ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, 40 ಕ್ಕೂ ಅಧಿಕ ಪ್ರಸಿದ್ಧ ಹಾಗೂ ಯುವ ಅರ್ಥಧಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ತೆಂಕು ಬಡಗಿನ ಸಮ್ಮಿಲನವಾಗಿ ಮಾತಿನ ಮಂಟಪ ರಂಗೇರುತ್ತಿದೆ.

ಎಂಟೂ‌ ದಿನಗಳಲ್ಲಿ ತಾಳಮದ್ದಲೆ ‌ಶ್ರೀಕೃಷ್ಣ ಜನ್ಮದಿಂದ ಶ್ರೀಕೃಷ್ಣಾನುಗ್ರಹದ ತನಕ ನಡೆಯಲಿದ್ದು,
ಪ್ರಥಮ ದಿನ ಆ.6 ರಂದು ಪಾರ್ತಿಸುಬ್ಬ, ಮಟ್ಟಿವಾಸುದೇವ ರಚನೆಯ ಶ್ರೀಕೃಷ್ಣಾವತಾರ ಕಂಸವಧೆ, 7 ರಂದು ವಿಷ್ಣು ಭಟ್ಟ ಕಿರಿಕ್ಕಾಡರ ಪಾಂಚಜನ್ಯ, 8 ರಂದು ಬಲಿಪ ನಾರಾಯಣ ಭಾಗವತರ ರುಕ್ಮಿಣೀ ಸ್ವಯಂವರ, ಆ.9 ರಂದು ಪಾರ್ತಿಸುಬ್ಬ, ಹಲಸಿನಳ್ಳಿ ನರಸಿಂಹ ಶಾಸ್ತ್ರಿಗಳ ಪಾರಿಜಾತಾಪಹರಣ,
ಆ.10 ರಂದು ಅಜ್ಞಾತ ಕವಿಯ ಅಗ್ರಪೂಜೆ ನಡೆಯಿತು.

ಆ 11 ರಂದು ಹಳೆಮಕ್ಕಿ ರಾಮ, ಸಂಕಯ್ಯ ಭಾಗವರ ಸತ್ವ ಪರೀಕ್ಷೆ, 12 ರಂದು‌ ದೇವಿದಾಸರ ಶ್ರೀಕೃಷ್ಣ ಸಾರಥ್ಯ, 13 ರಂದು
ಹಲಸಿನಳ್ಳಿ ಹಾಗೂ ದೇವಿದಾಸರ ರಚನೆಯ ಶ್ರೀಕೃಷ್ಣಾನುಗ್ರಹ ತಾಳಮದ್ದಲೆಗಳು ನಡೆಯಲಿದೆ.

ವೇದಿಕೆ ಒಂದೇ. ಆದರೆ ಎಂಟು ದಿನಗಳಲ್ಲಿ ನಾಡಿನ ಹೆಸರಾಂತ‌ ಕಲಾವಿದರು, ತಾಳಮದ್ದಲೆ ಅರ್ಥದಾರಿಗಳು ವೇದಿಕೆ ಹಂಚಿಕೊಳ್ಳಲಿರುವುದು ವಿಶೇಷವೇ ಆಗಿದೆ. ಭಾಗವತರಾದ ಕೇಶವ ಹೆಗಡೆ‌ ಕೊಳಗಿ, ರಾಮಕೃಷ್ಣ ಹಿಲ್ಲೂರು, ರಾಘವೇಂದ್ರ ಜನ್ಸಾಲೆ, ಗಣಪತಿ ಭಟ್ಟ, ಅನಂತ ದಂತಳಿಕೆ, ರವಿಚಂದ್ರ‌ ಕನ್ನಡಿಕಟ್ಟೆ, ಮದ್ದಲೆ ವಾದಕರಾದ ಶಂಕರ ಭಾಗವತ, ಎ.ಪಿ.ಪಾಠಕ, ನರಸಿಂಹ ಭಟ್ಟ ಹಂಡ್ರಮನೆ, ಅನಿರುದ್ಧ ಹೆಗಡೆ, ಚೈತನ್ಯ ಪದ್ಯಾಣ, ಚಂಡೆಯಲ್ಲಿ ಭಾರ್ಗವ ಹೆಗ್ಗೋಡು, ವಿಘ್ನೇಶ್ವರ ಗೌಡ, ಪ್ರಸನ್ನ ಭಟ್ ಹೆಗ್ಗಾರು ಪಾಲ್ಗೊಂಡಿದ್ದಾರೆ.

ಅರ್ಥಧಾರಿಗಳಾಗಿ ವಿದ್ಯಾ ವಾಚಸ್ಪತಿ ಉಮಾಕಾಂತ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವ ರಂಗಾ ಭಟ್ಟ, ವಿ.ಗಣಪತಿ ಭಟ್ಟ ಸಂಕದಗುಂಡಿ, ವಿ.ರವಿಶಂಕರ ದೊಡ್ನಳ್ಳಿ, ರಾಧಾಕೃಷ್ಣ‌ ಕಲ್ಚಾರ್, ವಿ. ರಾಮಚಂದ್ರ ಭಟ್ಟ, ವಿ.ಬಾಲಚಂದ್ರ ಭಟ್ಟ, ವಿ.ವಿನಾಯಕ ಭಟ್ಟ, ಸತೀಶ ಶೆಟ್ಟಿ ‌ಮೂಡಬಾಗೆ, ಡಿ.ಕೆ.ಗಾಂವಕರ್, ಮಂಜುನಾಥ ಗೊರಮನೆ, ಎಂ.ವಿ.ಹೆಗಡೆ ಅಮಚಿಮನೆ, ಜಬ್ಬಾರ ಸುಮೋ, ದಿವಾಕರ ಕೆರೆಹೊಂಡ, ವಾದಿರಾಜ ಕಲ್ಲೂರಾಯ, ಸುಬ್ರಾಯ ಕೆರೆಕೊಪ್ಪ, ಎಂ.ಎನ್.ಹೆಗಡೆ ಹಲವಳ್ಳಿ, ಹರೀಶ ಬೊಳಂತಿಮೊಗರು, ಶ್ರೀಧರ ಚಪ್ಪರಮನೆ,ವಿ.ಮಹೇಶ ಭಟ್ಟ, ಗಣೇಶ ಸುಂಕಸಾಳ, ವಿ.ಹಿರಣ್ಯ ವೆಂಕಟೇಶ ಭಟ್ಟ, ಡಾ.ಜಿಲ್.ಹೆಗಡೆ ಕುಮಟಾ ಪಾಲ್ಗೊಳ್ಳುತ್ತಿದ್ದಾರೆ.

ಸಮಾರೋಪ‌ ಸಮಾರಂಭ ಆ.13 ರಂದು ಸಂಜೆ 6:30 ಕ್ಕೆ ನಡೆಯಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅತಿಥಿಗಳಾಗಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು‌ ಕೇಶವ ಹೆಗಡೆ ವಹಿಸಿ ಕೊಳ್ಳಲಿದ್ದಾರೆ‌. ಪ್ರತಿ ದಿನದ ತಾಳಮದ್ದಲೆಯನ್ನು ಕೋಶಾಧ್ಯಕ್ಷ ಸೀತಾರಾಮ ಚಂದು ನಿರ್ವಹಿಸುತ್ತಿದ್ದಾರೆ.