ಇಲ್ಲಿ ಜನರು ಶವಗಳನ್ನು ಸುಡುವುದಿಲ್ಲ, ಕಾಡಿನಲ್ಲಿ ಕೊಳೆಯಲು ಬಿಡ್ತಾರೆ, ಕಾರಣ ವಿಚಿತ್ರ :

ಇಂಡೋನೇಷ್ಯಾದ ಬಾಲಿಯ ದ್ವೀಪದಲ್ಲಿರುವ ಈ ಗ್ರಾಮದಲ್ಲಿ ಆಚರಣೆಗಳು ತುಂಬಾ ವಿಚಿತ್ರ. ಇಲ್ಲಿ ಯಾರಾದರೂ ಸತ್ತರೆ ಅವರನ್ನು ಸುಡುವುದಾಗಲಿ, ಹೂಳುವುದಾಗಲಿ ಮಾಡುವುದಿಲ್ಲ. ಬದಲಾಗಿ ಅವುಗಳನ್ನು ಕಾಡಿನಲ್ಲಿ ಕೊಳೆಯಲು ಬಿಡುತ್ತಾರೆ. ಈ ಆಚರಣೆ ಹಿಂದಿರುವ ನಂಬಿಕೆ ಏನು ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಪ್ರಪಂಚದ ಒಂದೊಂದು ಕಡೆ ಒಂದೊಂದು ರೀತಿಯಾಗಿ ಶವಗಳ ಅಂತ್ಯಸಂಸ್ಕಾರ ನಡೆಯುತ್ತೆ. ಕೆಲವು ಕಡೆ ಶವವನ್ನು ಸುಟ್ಟರೆ ಇನ್ನೂ ಕೆಲವು ಕಡೆ ಹೂಳುತ್ತಾರೆ. ಆದರೆ ವಿಚಿತ್ರ ಸಂಗತಿ ಎಂದರೆ ಇಂಡೋನೇಷ್ಯಾದ ಬಾಲಿಯಲ್ಲಿ ಶವವನ್ನು ಹೂಳುವುದೂ ಇಲ್ಲ, ಸುಡುವುದೂ ಇಲ್ಲ ಬದಲಾಗಿ ಶವವನ್ನು ಕಾಡಿನಲ್ಲಿಯೇ ಕೊಳೆಯಲು ಬಿಡುತ್ತಾರೆ.

ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಟ್ರುನಿಯನ್​ ಎಂಬ ಹೆಸರಿನ ಗ್ರಾಮವಿದೆ. ಇಲ್ಲಿ ವಾಸಿಸುವ ಜನರನ್ನು ಬಲಿ, ಬಲಿಯಾಗ, ಬಲಿ ಮುಲಾ ಎಂದು ಕರೆಯಲಾಗುತ್ತದೆ. ಇಲ್ಲಿನ ಜನರು ಹೊಸ ಸಂಪ್ರದಾಯಕ್ಕೆ ಕಟ್ಟುಬಿದ್ದಿಲ್ಲ, ತಮ್ಮದೇ ಆದ ನಿಯಮಗಳನ್ನು ಅನುಸರಿಸುತ್ತಾರೆ. ಪಾರ್ಸಿ ಜನಾಂಗವು ತಮ್ಮ ಪ್ರೀತಿಪಾತ್ರರ ಶವವನ್ನು ಪಕ್ಷಿ, ಪ್ರಾಣಿಗಳಿಗೆ ತಿನ್ನಲು ಬಿಡುತ್ತಾರೆ ಎಂಬುದನ್ನು ನೀವು ಕೇಳಿರಬಹುದು.

ಆದರೆ ಇದು ಸಂಪೂರ್ಣ ವಿರುದ್ಧವಾಗಿದ್ದು, ಮೃತದೇಹಗಳನ್ನು ರಣಹದ್ದುಗಳು, ಕಾಗೆಗಳು ತಿನ್ನದಂತೆ ಬಿದಿರಿನ ಪಂಜರಗಳಲ್ಲಿ ಇರಿಸಲಾಗುತ್ತದೆ. ಏಕೆಂದರೆ ಯಾವುದೇ ಜೀವಿ ಈ ಮೃತದೇಹವನ್ನು ತಿಂದರೆ ಸತ್ತವರಿಗೆ ಅವಮಾನವಾಗುತ್ತೆ ಎಂಬುದು ಅವರ ನಂಬಿಕೆ. ಅಮ್ಯೂಸಿಂಗ್​ ಪ್ಲಾನೆಟ್​ ವರದಿ ಪ್ರಕಾರ, ಮೃತದೇಹದಿಂದ ಮಾಂಸವನ್ನು ತೆಗೆದ ನಂತರ ಈ ಜನರು ತಲೆಬುರುಡೆ ಮತ್ತು ಇತರೆ ಮೂಳೆಗಳನ್ನು ಹೊರತೆಗೆದು ಒಂದು ಕಡೆ ಅಲಂಕರಿಸುತ್ತಾರೆ. ಆದರೆ ತುಂಬಾ ವರ್ಷದ ಹಳೆಯ ಆಲದಮರವಿದೆ ಇಲ್ಲಿ ದೇಹದ ದುರ್ವಾಸನೆ ಬರುವುದಿಲ್ಲ, ಟ್ರೂನಿಯನ್ ಸ್ಮಶಾನಕ್ಕೆ ಬರುವ ಹಲವು ಮಂದಿ ಅದರ ಬಗ್ಗೆ ತಿಳಿದು ಆಶ್ಚರ್ಯಪಡುತ್ತಾರೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಇಲ್ಲಿ ಸಮಾಧಿ ಮಾಡಲಾಗುವುದಿಲ್ಲ. ಟ್ರುನಿಯನ್ ಗ್ರಾಮದ ಬಳಿ ಮೂರು ಸ್ಮಶಾನಗಳಿವೆ,ಇಲ್ಲಿ ನೈಸರ್ಗಿಕವಾಗಿ ಸಾವನ್ನಪ್ಪಿದ್ದವರ ಶವಗಳನ್ನು ಮಾತ್ರ ಇಡಲಾಗಿದೆ. ಅಪಘಾತ ಅಥವಾ ಆತ್ಮಹತ್ಯೆಯಲ್ಲಿ ಮರಣ ಹೊಂದಿದವರನ್ನು ಸಮಾಧಿ ಮಾಡಲು ಅರ್ಹರೆಂದು ಪರಿಗಣಿಸಲಾಗುವುದಿಲ್ಲ. ಅವರನ್ನು ಬೇರೆ ಕಡೆ ಸಮಾಧಿ ಮಾಡಲಾಗುತ್ತದೆ. ಮಕ್ಕಳನ್ನು ಅಲ್ಲಿಗೆ ಕರೆದೊಯ್ಯುವುದಿಲ್ಲ, ವಿವಾಹಿತರ ಶವಗಳನ್ನು ಮಾತ್ರ ಇಲ್ಲಿ ಇರಿಸಲಾಗುತ್ತದೆ.

ಬಾಲಿಯಲ್ಲಿ ಜ್ವಾಲಾಮುಖಿ ಹೆಚ್ಚು ಹಾಗಾಗಿ ಸತ್ತವರ ದೇಹವನ್ನು ಭೂಮಿಗೆ ಕೊಟ್ಟರೆ ದೇವತೆಗಳು ಕೋಪಗೊಳ್ಳುವುದಿಲ್ಲ ಎಂಬುದು ನಂಬಿಕೆ. ಕೆಲವು ಮೃತದೇಹಗಳಿಗೆ ಸ್ಥಳಾವಕಾಶವಿಲ್ಲದಿದ್ದರೆ ಹಲವು ದಿನಗಳ ಕಾಲ ಅವುಗಳನ್ನು ಮನೆಯಲ್ಲಿಯೇ ಇರಿಸಿಕೊಳ್ಳಲಾಗುತ್ತದೆ. ಮೃತ ದೇಹಗಳು ಕೊಳೆಯುವುದನ್ನು ತಡೆಯಲು ಫಾರ್ಮಾಲ್ಡಿಹೈಡ್​ನಲ್ಲಿ ಸುತ್ತಿಡಲಾಗುತ್ತದೆ.