ನೆರೆಹಾವಳಿ ಸಮಯದಲ್ಲಿ ಸಹಕರಿಸಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಶಾಸಕ ಸುನೀಲ್ ನಾಯ್ಕ್

ಭಟ್ಕಳ: ನೆರೆ ಹಾವಳಿ ವೇಳೆಯಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಕೈ ಜೋಡಿಸಿ ಬಿಜೆಪಿ ಕಾರ್ಯಕರ್ತರಿಗೆ ಶಾಸಕ ಸುನೀಲ ನಾಯ್ಕ ಧನ್ಯವಾದ ತಿಳಿಸಿದರು. ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಳೆಯಿಂದ ಉಂಟಾದ ಹಾನಿಯ ಕುರಿತು ವಿವರಿಸಿದರು.

ಮಳೆಯಿಂದ ಅವಘಡ ನಡೆದ ಬಗ್ಗೆ ರಾತ್ರಿ 2.30 ಕ್ಕೆ ಕಾರ್ಯಕರ್ತರೊಬ್ಬರು ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಮೊದಲು ಮಣ್ಕುಳಿ ಹಾಗೂ ಮುಟ್ಟಳ್ಳಿ ಭಾಗಕ್ಕೆ ಬಂದು ಸ್ಥಳ ಪರಿಶೀಲನೆ ಮಾಡುವ ವೇಳೆ ಅಲ್ಲಿನ ಪರಿಸ್ಥಿತಿ ನೋಡಿ ಒಂದು ಬಾರಿ ಮೌನ ಮುರಿದು ಬಿಟ್ಟೆ. ಇಂಥಹ ಘಟನೆಗಳು ಹೊನ್ನಾವರ ಭಾಗದಲ್ಲಿ ಪ್ರತಿ ವರ್ಷ ನೋಡುತ್ತೇವೆ ಆದರೆ ಭಟ್ಕಳದ ಇತಿಹಾಸದಲ್ಲೇ ಮೊದಲ ಬಾರಿ ಇಂತಹ ದುರ್ಘಟನೆ ಸಂಭವಿಸಿದೆ ಎಂದರು.

ಆ. 7 ರ ತನಕ ಭಟ್ಕಳ ತಾಲ್ಲೂಕಿಲನಲ್ಲಿ ಪ್ರತಿ ಮನೆಗೆ 10 ಸಾವಿರದಂತೆ 4 ಸಾವಿರ ಮನೆಗಳಿಗೆ  ಈಗಾಗಲೇ ತಾಲೂಕಾಡಳಿತ ಅವರ ಖಾತೆಗಳಿಗೆ ಹಣ ಜಮಾ ಮಾಡಿದೆ. 88 ಮನೆಗಳ ಪೈಕಿ ಪ್ರಥಮ ವರದಿಯಲ್ಲಿ 39 ಮನೆಗಳಿಗೆ ತಲಾ 95,100 ಅವರ ಖಾತೆಗೆ ಜಮಾ ಮಾಡಲಾಗಿದೆ ಹಾಗೂ 365 ಅಂಗಡಿಗಳಿಗೆ ನೀರು ನುಗ್ಗಿದ್ದು ಪ್ರಥಮ ಹಂತದಲ್ಲಿ 135 ಅಂಗಡಿಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

36 ದೋಣಿಗಳು ಹಾಗೂ 107 ಮಾರ್ಟ ಬಲೆಗಳು ಹಾನಿಯಾಗಿರುವ ಬಗ್ಗೆ ವರದಿ ಬಂದಿದೆ. ದೋಣಿ ಹಾನಿ  ಹಾಗೂ ಅಂಗಡಿ ಮಳಿಗೆ ನೀರು ನುಗ್ಗಿರುವುದರ ಪರಿಹಾರದ ಕುರಿತು ಇರಡು ದಿನದ ಒಳಗಾಗಿ ಮುಖ್ಯಮಂತ್ರಿಗಳೊಂದಿಗೆ ಸಭೆ ಮಾಡಿ ದೋಣಿ ಹಾಗೂ ಅಂಗಡಿಕಾರರಿಗೆ ಪರಿಹಾರ ನೀಡುತ್ತೇವೆ ಎಂದರು.

ಈ ಬಗ್ಗೆ ಮಾಹಿತಿ ತಿಳಿದ ಮುಖ್ಯಮಂತ್ರಿಗಳು ಭಟ್ಕಳಕ್ಕೆ ಭೇಟಿ ನೀಡಿ ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದರ ಜೊತೆ ಸರ್ಕಾರ ನಿಮ್ಮೊಂದಿಗೆ ನಿಲ್ಲುತ್ತದೆ ಎಂಬ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು.