ರಾಮನ ವಿಚಾರ ಜಗತ್ತಿಗೆ ತಲುಪಿಸಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು – ಸೂಲಿಬೆಲೆ

ಸಿದ್ದಾಪುರ, ಏಪ್ರಿಲ್‌ 15 : ರಾಮಮಂದಿರವನ್ನು ನಿರ್ಮಿಸುವ ಮೂಲಕ ನರೇಂದ್ರ ಮೋದಿಯವರು ಇಡೀ ಜಗತ್ತಿಗೆ ಸಂದೇಶ ಕೊಟ್ಟಿದ್ದಾರೆ. ಈಗ ರಾಮನ ವಿಚಾರ ಜಗತ್ತಿಗೆ ತಲುಪಿಸಲು ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ನಮೋ ಬ್ರಿಗೇಡ್ ಸ್ಥಾಪಕ ಚಕ್ರವರ್ತಿಸೂಲಿಬೆಲೆ ಹೇಳಿದರು.

ಅವರು ರವಿವಾರ ಸಿದ್ದಾಪುರ ಪಟ್ಟಣದ ನೆಹರೂ ಮೈದಾನದಲ್ಲಿ ಸ್ಥಳೀಯ ನಮೋ ಬ್ರಿಗೇಡ್ ಆಯೋಜಿಸಿದ್ದ ನಮೋ ಭಾರತ ಶುರುವಾಗಿದೆ  ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ನಮ್ಮ ದೇಶ ಹೇಗೆ ಇರಬೇಕು ಎಂದು ಕನಸು ಕಾಣುತ್ತಿದ್ದ ಲಕ್ಷಾಂತರ ಜನರ ಕನಸನ್ನು ಮೋದಿಯವರು ನನಸು ಮಾಡಿದ್ದಾರೆ.

ಇವತ್ತು ಜಗತ್ತಿನಲ್ಲಿ ಭಾರತ ತಲೆ ಎತ್ತಿ ನಿಂತಿರುವುದು ಮೋದಿಯವರಿಂದ. ಕೊರೊನಾ ಸಮಯದಲ್ಲಿ  ಬೇರೆ ದೇಶದವರಿಗೆ ಕೊರೊನಾ ಲಸಿಕೆ ನೀಡಿರುವುದು, ಪಾಕಿಸ್ತಾನ ಬೆಂಬಲಿತ ಉಗ್ರರನ್ನು ಎದುರಿಸುವ ದಿಟ್ಟನಿರ್ಧಾರ ಮಾಡಿರುವುದು, ರಾಮಮಂದಿರ ನಿರ್ಮಾಣ ಮಾಡಿದ್ದು ಈ ಎಲ್ಲ  ದಿಟ್ಟ ನಿರ್ಧಾರ ನಮ್ಮ ದೇಶವನ್ನು ಇಂದು ಜಗತ್ತಿನ ಮುಂದೆ ಎದೆಯುಬ್ಬಿಸಿ ನಿಂತಿರುವುದು ಮೋದಿಯವರಿಂದ. ಇಂತಹ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು ಎಂದು ಹೇಳಿದರು.

ಮೋದಿಯವರು ಕೇವಲ ದೇಶದ ಅಭಿವೃದ್ಧಿಯನ್ನಷ್ಟೆ ಮಾಡಿಲ್ಲ. ನಮ್ಮ ಸನಾತನ ಪರಂಪರೆಯ ಹಿಂದೂ ಸಂಸ್ಕೃತಿಯ ಉಳಿವಿಗೆ ಕಾರಣ ರಾಗಿದ್ದಾರೆ. ಯಾವ ಧರ್ಮದ ಕುರಿತು ಅವಹೇಳನ ಮಾಡುತ್ತಿದ್ದ ವಿದೇಶಿಯರು ಇಂದು ಹಿಂದೂ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ ನಮ್ಮ ಆಚರಣೆಗಳ ಬಗ್ಗೆ ಕುತೂಹಲ ಮೂಡಿಸಿಕೊಂಡು ಅದರ ಆಚರಣೆಗೆ ಮುಂದಾಗುತ್ತಿದ್ದಾರೆ. ಹಿಂದೂ ಸಂಸ್ಕೃತಿಯ ಆಚರಣೆ ಅಂದರೆ ಅದು ಮುಸ್ಲಿಂ ವಿರೋಧಿ ಎಂಬ ಭಾವನೆಯನ್ನು ತೊಡೆದು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದವರು ಮೋದಿಯವರನ್ನು ಮುಸ್ಲಿಂ ವಿರೋಧಿಗಳು ಎಂದು ಬಿಂಬಿಸುತ್ತಿದ್ದಾರೆ. ಆದರೆ ಅವರು ಮುಸ್ಲಿಂರನ್ನು ಭಾರತೀಯತೆಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಮುಸ್ಲಿಂ ರಾಷ್ಟಗಳು ಮೋದಿಯವರನ್ನು ತಮ್ಮ ಸ್ನೇಹಿತನೆಂದು ಕರೆಯುತ್ತಿದ್ದಾರೆ

ತಮ್ಮ ರಾಷ್ಟದ ಅತ್ಯುನ್ನತ ಗೌರವವನ್ನು ಅವರಿಗೆ ನೀಡುತ್ತಿದ್ದಾರೆ. ಮುಸ್ಲಿಂರು ಇದನ್ನು ಮನಗಾಣಬೇಕು. ಇದು ಕೇವಲ ಲೋಕಸಬಾ ಚುನಾವಣೆಯಲ್ಲಿ ಮೋದಿಯವರನ್ನು ಪ್ರಧಾನಿ ಮಾಡುವ ಚುನಾವಣೆಯಲ್ಲ. ದೇಶದ ಅಳಿವು ಉಳಿವಿನ ಚುನಾವಣೆ. ನಮ್ಮ ವಯಕ್ತಿಕ ಪ್ರತಿಷ್ಠೆಯನ್ನು, ಲಾಭವನ್ನು ಪಕ್ಕಕ್ಕಿಟ್ಟು ಚುನಾವಣೆ ಮಾಡಬೇಕು. ಮೋದಿಯವರನ್ನು ಬೆಂಬಲಿಸುವ ಅಭ್ಯರ್ಥಿಯನ್ನು ಗೆಲೆಲಿಸುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ಕರೆಕೊಟ್ಟರು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಷಣ್ಮುಖ ಗೌಡ, ರಾಜೇಶ ನಾಯ್ಕ ಬೇಡ್ಕಣಿ, ವಸಂತ ನಾಯ್ಕ ಹುಲಿಮನೆ, ರಮೇಶ ನಾಯ್ಕ ಉಪಸ್ಥಿತರಿದ್ದರು. ತಾಲೂಕು ಸಂಚಾಲಕ ಹರೀಶ ನಾಯ್ಕ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರಸೇವಕ ಶ್ರೀಧರ ಭಟ್ಟ ಶಿರಳಗಿ, ಲಕ್ಷ್ಮಣ ನಾಯ್ಕ ದೊಂಬೆಯವರಿಗೆ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನಿಸಲಾಯಿತು..