ಸಿಎಂ ಸಿದ್ದರಾಮಯ್ಯ ಪಾತಿವ್ರತ್ಯ ನಮಗೆ ಗೊತ್ತಿರೋದೇ: ಸಿ.ಟಿ. ರವಿ

Lok Sabha Election 2024: ಈ ಹಿಂದೆ ಸಿದ್ದರಾಮಯ್ಯ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ಸೀಟು ಬರುವುದಿಲ್ಲ ಎಂದಿದ್ದರು. ಅವರ ಶಾಪ ತಟ್ಟಿ ಕಾಂಗ್ರೆಸ್ಸಿಗೆ ಒಂದು, ಜನತಾದಳಕ್ಕೆ ಒಂದು ಸೀಟು ಬಂದಿತ್ತು. ಈಗಿನ ಅವರ ಶಾಪ ಅವರಿಗೇ ತಿರುಗುಬಾಣವಾದರೆ, 2019ರ ಫಲಿತಾಂಶ ಮರುಕಳಿಸಬಹುದು ಎಂದು ಸಿ.ಟಿ. ರವಿ ಹೇಳಿದ್ದಾರೆ.

ಬೆಂಗಳೂರು, ಮಾರ್ಚ್‌ 26 : ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಕ್ಸಮರಗಳು ಜೋರಾಗುತ್ತಿದ್ದು, ಪರಸ್ಪರ ಆರೋಪ – ಪ್ರತ್ಯಾರೋಪಗಳು ಹೆಚ್ಚುತ್ತಿವೆ. ಈಗ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪಾತಿವ್ರತ್ಯದ ಬಗ್ಗೆ ಮಾತನಾಡಿದ್ದಾರೆ. “ಸಿಎಂ ಸಿದ್ದರಾಮಯ್ಯ ಅವರ ಪಾತಿವ್ರತ್ಯ ನಮಗೆ ಗೊತ್ತಿರೋದೇ. ಅವರ ತಪಸ್ಸಿನ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಅವರೇನಾದರೂ ಹೇಳಿದರೆ ಅದು ಅವರಿಗೇ ಉಲ್ಟಾ ಆಗಲಿದೆ” ಎಂದು ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರು, ನಾಡಿನ ಸಂಸ್ಕೃತಿ ಹೀಗೇನೋ ಎಂಬಂತೆ ಮಾತನಾಡಿದ್ದಾರೆ. ಮೋದಿ ಮೋದಿ (PM Narendra Modi) ಎನ್ನುವ ಯುವಜನರಿಗೆ ಕಪಾಳಮೋಕ್ಷ ಮಾಡಬೇಕು ಎಂದಿದ್ದಾರೆ. ಸಿದ್ದರಾಮಯ್ಯನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿಯವರ ಮನೆ ಹಾಳಾಗಲಿ ಎಂದು ಶಾಪ ಕೊಟ್ಟರು. ತಪಸ್ವಿ, ಪತಿವ್ರತೆ ಶಾಪ ಕೊಟ್ಟರೆ ತಟ್ಟುವುದಾಗಿ ಹೇಳುತ್ತಾರೆ. ಸಿದ್ದರಾಮಯ್ಯನವರ ಪಾತಿವ್ರತ್ಯ ನಮಗೆ ಗೊತ್ತಿರೋದೇ. ಅವರ ತಪಸ್ಸಿನ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಅವರೇನಾದರೂ ಹೇಳಿದರೆ ಅದು ಅವರಿಗೇ ಉಲ್ಟಾ ಆಗಲಿದೆ. ಈ ಹಿಂದೆ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ಸೀಟು ಬರುವುದಿಲ್ಲ ಎಂದಿದ್ದರು. ಅವರ ಶಾಪ ತಟ್ಟಿ ಕಾಂಗ್ರೆಸ್ಸಿಗೆ ಒಂದು, ಜನತಾದಳಕ್ಕೆ ಒಂದು ಸೀಟು ಬಂದಿತ್ತು. ಈಗಿನ ಅವರ ಶಾಪ ಅವರಿಗೇ ತಿರುಗುಬಾಣವಾದರೆ, 2019ರ ಫಲಿತಾಂಶ ಮರುಕಳಿಸಬಹುದು ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್ಸಿಗರಿಗೆ ಸೋಲಿನ ಹತಾಶೆ ಕಾಡುತ್ತಿರುವಂತಿದೆ. ಜನರೇ ಮೋದಿ ಮೋದಿ ಎನ್ನುವ ಕಾರಣ ಅಸಹಾಯಕತೆ ಕಾಡುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ಸಿ.ಟಿ. ರವಿ ಕಿಡಿಕಾರಿದರು.

ಕಾಂಗ್ರೆಸ್ಸಿಗರು “ಕೈಲಾಗದವ ಮೈ ಪರಚಿಕೊಂಡ” ಎಂಬಂತೆ ದ್ವೇಷ ಮತ್ತು ಅಸಹಿಷ್ಣುತೆಯ ಮಾತುಗಳನ್ನು ಆಡುತ್ತಿದ್ದಾರೆ. ಇವರ ನಾಯಕ ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋಗಿ ಭಾರತವನ್ನು ಅಪಮಾನ ಮಾಡುವ ಕೆಲಸ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಗೆಗಿನ ವಿರೋಧ ಮತ್ತು ದ್ವೇಷಕ್ಕಾಗಿ ಭಾರತ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಭಾರತದ ಸಹಿಷ್ಣುತೆಯನ್ನು ಪ್ರಶ್ನಿಸಿ ಅವಮಾನ ಮಾಡಿದ್ದಾರೆ ಎಂದು ಸಿ.ಟಿ. ರವಿ ಆಕ್ಷೇಪಿಸಿದರು.

ಈ ಲೋಕಸಭಾ ಚುನಾವಣೆಯಲ್ಲಿ ಇಂಡಿ ಒಕ್ಕೂಟದ ನೇತೃತ್ವ ಇನ್ನೂ ನಿರ್ಧಾರವಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಈ ವಿಷಯದಲ್ಲಿ ಸ್ಪಷ್ಟತೆ ಇಲ್ಲ. ಯಾವ ನೀತಿ ಇಟ್ಟುಕೊಂಡು ಜನರ ಮುಂದೆ ಹೋಗಬೇಕು ಎಂಬುದಕ್ಕೆ ನೀತಿಯೇ ಇಲ್ಲ. ಅಸಹಿಷ್ಣುತೆ, ದ್ವೇಷವೇ ಇಂಡಿ ಒಕ್ಕೂಟದ ನೀತಿಯಾಗಿದೆ ಎಂದು ಸಿ.ಟಿ. ರವಿ ಟೀಕಿಸಿದರು.