ಸಮಾಧಾನವಾಗಿಲ್ಲ ಅಂದರೆ ಉತ್ತರ ಕನ್ನಡ ಅಭ್ಯರ್ಥಿ ಬದಲಿಸ್ತಾರಾ?: ಬಿಜೆಪಿ ನಾಯಕರಿಗೆ ಶಿವರಾಮ್ ಹೆಬ್ಬಾರ್ ಪ್ರಶ್ನೆ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡಲಾಗಿದೆ. ಈ ಬಗ್ಗೆ ಕೆಲವು ಮುಖಂಡರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ನನಗೆ ಸಮಾಧಾನವಾಗಿಲ್ಲ ಅಂದರೆ ಅವರು ಅಭ್ಯರ್ಥಿ ಬದಲಿಸ್ತಾರಾ? ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರು ಪರೋಕ್ಷವಾಗಿ ಅಭ್ಯರ್ಥಿ ಆಯ್ಕೆ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆಗೆ ಕಸರತ್ತು ನಡೆಸುತ್ತಿದ್ದು, ಈ ಸಂಬಂಧ ಕಾಂಗ್ರೆಸ್​ನಲ್ಲಿ ಚರ್ಚೆಗಳು ನಡೆಯುತ್ತಿವೆ.

ಕಾರವಾರ, ಮಾರ್ಚ್‌ 26 : ಉತ್ತರ ಕನ್ನಡ (Uttara Kannada) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರನ್ನು ಆಯ್ಕೆ ಮಾಡಿರುವುದು ಸಮಾಧಾನ ತಂದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಹೋಗಲು ತುದಿಗಾಲಿನಲ್ಲಿ ನಿಂತಿರುವ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಪರೋಕ್ಷವಾಗಿ ಹೇಳಿದ್ದಾರೆ. ಶಿರಸಿಯಲ್ಲಿ ಮಾತನಾಡಿದ ಅವರು, ನನಗೆ ಸಮಾಧಾನವಾಗಿಲ್ಲ ಅಂದರೆ ಅವರು ಅಭ್ಯರ್ಥಿ ಬದಲಿಸ್ತಾರಾ ಎಂದು ಪ್ರಶ್ನಿಸಿದ್ದಾರೆ.

ಯಾರ ಪರ ಕೆಲಸ ಮಾಡಬೇಕೆಂದು ನಿರ್ಣಯಮಾಡಿ ಹೇಳುತ್ತೇನೆ. ಯಾರ ಸಮಾಧಾನ ಅಥವಾ ಅಸಮಾಧಾನವನ್ನು ಬಿಜೆಪಿ ಹೈಕಮಾಂಡ್ ಕೇಳುವುದಿಲ್ಲ. ಅವರ ಸಮಾಧಾನ ಹೇಗಿದೆಯೋ ಹಾಗೆ ನಿರ್ಣಯ ಮಾಡುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಹೆಬ್ಬಾರ್ ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಗೈರಾಗುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುವಂತೆ ಮಾಡಿದ್ದ ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೆಬ್ಬಾರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದರೂ ಶಿರಸಿ ಕೈ ಮುಖಂಡರು ಮತ್ತು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸಭೆ ನಡೆಯುತ್ತಿದ್ದ ವೇಳೆ ಕೆಲವರು ಹೆಬ್ಬಾರ್​ಗೆ ಸ್ವಾಗತ ಎಂದರೆ, ಹೆಚ್ಚಿನವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೆಬ್ಬಾರ್ ಬೆಂಬಲಿಗರು ಮತ್ತು ಕೈ ಕಾರ್ಯಕರ್ತರ ನಡುವೆ ಗಲಾಟೆಯೇ ನಡೆದಿದೆ.

ಕಾಂಗ್ರೆಸ್ ಸೇರ್ಪಡೆಗೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವರಾಮ್ ಹೆಬ್ಬಾರ್, ನಾನು ಕಾಂಗ್ರೆಸ್​ಗೆ ಸೇರ್ಪಡೆ ಆಗುತ್ತೇನೆ ಎಂದು ಅವರಿಗೆ ಅರ್ಜಿ ಕೊಡಲು ಹೋಗಿಲ್ಲ. ನಾನು ಸೇರ್ಪಡೆ ಆಗುತ್ತೇನೆ ಅಥವಾ ಇಲ್ಲವೋ ಎಂಬುದನ್ನು ಹೇಳುತ್ತೇನೆ. ಬೆಂಬಲಿಗರಿಂದ ಕಾಂಗ್ರೆಸ್ ಸೇರುವ ನಿರ್ಣಯ ಅರ್ಜೆಂಟ್ ಆಗಬಹುದು. ಅಂತರವನ್ನು ಕಾಯ್ದುಕೊಳ್ಳುವ ಸಂದರ್ಭ ಬಂದಾಗ ಕಾಯ್ದುಕೊಳ್ಳಲೇಬೇಕು ಎಂದರು.

ಯಾವ ರಾಜಕೀಯ ಪಕ್ಷಗಳು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ, ಎಲ್ಲಾ ರಾಜಕೀಯ ಪಕ್ಷಗಳಿಗೂ ಹೋಗುತ್ತಾರೆ, ಬರುತ್ತಾರೆ. ಕಾಂಗ್ರೆಸ್​ನವರು ಬಿಜೆಪಿಗೆ ಬರುತ್ತಾರೆ, ಬಿಜೆಪಿಯವರು ಕಾಂಗ್ರೆಸ್​ಗೆ ಹೋಗುತ್ತಾರೆ. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಏನಾಯ್ತು? ನಾನು ವೋಟ್ ಹಾಕದಿರುವ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು (ಬಿಜೆಪಿ) ಆರು ವೋಟು ಹಾಕಿ ಸಸ್ಪೆಂಡ್ ಆಗಿದ್ದಾರೆ. ಅದರ ಬಗ್ಗೆ ಯಾರು ಮಾತನಾಡುವುದಿಲ್ಲ ಎಂದರು.

ನೀತಿ ಎಂದರೇ ಕರ್ನಾಟಕಕ್ಕೂ ಒಂದೇ ಇರಬೇಕು, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶಕ್ಕೂ ಒಂದೇ ಇರಬೇಕು. ಕರ್ನಾಟಕದಲ್ಲಿ ಬಿಜೆಪಿ ಶಾಸಕ ಮತ ಹಾಕದಿದ್ದದ್ದು ತಪ್ಪು, ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯವರು ಕಾಂಗ್ರೆಸ್​ಗೆ ಮತ ಹಾಕಿದ್ದು ಸರಿ. ಈ ವಿತಂಡ ವಾದ ಏಕೆ ಎಂದು ಹೆಬ್ಬಾರ್ ಪ್ರಶ್ನಿಸಿದರು.