ತಮಿಳುನಾಡು: 9 ಲೋಕಸಭಾ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬಿಜೆಪಿ; ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ

ಕೊಯಮತ್ತೂರು ಕ್ಷೇತ್ರದಿಂದ ಅಣ್ಣಾಮಲೈ ಕಣಕ್ಕಿಳಿಯಲಿದ್ದಾರೆ. ಚೆನ್ನೈ ದಕ್ಷಿಣದಿಂದ ತೆಲಂಗಾಣದ ಮಾಜಿ ಗವರ್ನರ್ ತಮಿಳುಸಾಯಿ ಸೌಂದರರಾಜನ್, ಕನ್ಯಾಕುಮಾರಿಯಿಂದ ಪೊನ್ ರಾಧಾಕೃಷ್ಣನ್ ಮತ್ತು ತೂತುಕ್ಕುಡಿಯಿಂದ ನೈನಾರ್ ನಾಗೇಂದ್ರನ್ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ.

ಚೆನ್ನೈ ಮಾರ್ಚ್ 21: ಬಿಜೆಪಿ ಗುರುವಾರ ತಮಿಳುನಾಡಿನ (Tamil Nadu) ಒಂಬತ್ತು ಲೋಕಸಭಾ ಕ್ಷೇತ್ರಗಳಲ್ಲಿ (Lok sabha Election) ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಕೊಯಮತ್ತೂರು ಕ್ಷೇತ್ರದಿಂದ ಅಣ್ಣಾಮಲೈ (Annamalai) ಕಣಕ್ಕಿಳಿಯಲಿದ್ದಾರೆ. ಚೆನ್ನೈ ದಕ್ಷಿಣದಿಂದ ತೆಲಂಗಾಣದ ಮಾಜಿ ಗವರ್ನರ್ ತಮಿಳುಸಾಯಿ ಸೌಂದರರಾಜನ್, ಕನ್ಯಾಕುಮಾರಿಯಿಂದ ಪೊನ್ ರಾಧಾಕೃಷ್ಣನ್ ಮತ್ತು ತೂತುಕ್ಕುಡಿಯಿಂದ ನೈನಾರ್ ನಾಗೇಂದ್ರನ್ ಸ್ಪರ್ಧಿಸಲಿದ್ದಾರೆ. ರಾಧಾಕೃಷ್ಣನ್ ಅವರು ಮೋದಿ ಸರ್ಕಾರದಲ್ಲಿ ಮಾಜಿ ಸಚಿವರಾಗಿದ್ದರು. ಕನ್ಯಾಕುಮಾರಿಯ ಮಾಜಿ ಸಂಸದರೂ ಆಗಿದ್ದಾರೆ ಅವರು

ವೆಲ್ಲೂರಿನಿಂದ ಪುದಿಯ ನೀಧಿ ಕಚ್ಚಿ (ಪಿಎನ್‌ಕೆ) ಮುಖ್ಯಸ್ಥ ಎಸಿ ಷಣ್ಮುಗಂ ಮತ್ತು ತಮಿಳುನಾಡಿನ ಪೆರಂಬಲೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಟಿಆರ್ ಪರಿವೇಂದರ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ. ಟಿಆರ್ ಪಾರಿವೇಂದರ್ ಅವರು ಭಾರತೀಯ ಜನನಾಯಕ ಕಚ್ಚಿ (ಐಜೆಕೆ) ನಾಯಕರಾಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಪರಿವೇಂದರ್ ಡಿಎಂಕೆ ಚಿಹ್ನೆಯಲ್ಲಿ ಸ್ಪರ್ಧಿಸಿ ಕ್ಷೇತ್ರದಲ್ಲಿ ಗೆದ್ದಿದ್ದರು.